ಜಮೀರ್ ಅಹಮದ್‌ ಗಲ್ಲಿಗೇರಿಸಿ: ಮುತಾಲಿಕ್

| Published : Nov 06 2024, 11:50 PM IST

ಸಾರಾಂಶ

ಜಮೀರ್ ಅಹಮದ್ ಖಾನ್‌ ರಾಜ್ಯಾದ್ಯಂತ ವಕ್ಫ್ ಅದಾಲತ್ ನಡೆಸುತ್ತಿದ್ದು, ಇದು ಅತ್ಯಂತ ಗಂಭೀರವಾದ ವಿಷಯ. ಇವರಿಗೆ ಅಧಿಕಾರದ ಮದ ಏರಿದೆ. ತನ್ನ ಚಾಮರಾಜಪೇಟೆ ಕ್ಷೇತ್ರದಲ್ಲಿ 25‌ ಸಾವಿರಕ್ಕೂ ಅಧಿಕ ದೇಶದ್ರೋಹಿ ಬಾಂಗ್ಲಾ ಮುಸ್ಲಿಮರನ್ನು ಸಲಹುತ್ತಿದ್ದಾರೆ.

ಹುಬ್ಬಳ್ಳಿ:

ವಕ್ಫ್ ಬೋರ್ಡ್ ಹೆಸರಿನಲ್ಲಿ ಸಚಿವ ಜಮೀರ್ ಅಹಮದ್ ಖಾನ್‌ ರೈತರು ಮತ್ತು ಜನಸಾಮಾನ್ಯರ ಆಸ್ತಿ ಕಬಳಿಸುವ ಮೂಲಕ ದೇಶದ್ರೋಹಿ ಕೆಲಸ ಮಾಡುತ್ತಿದ್ದು, ಅವರನ್ನು ಗಲ್ಲಿಗೇರಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹಮದ್ ಖಾನ್‌ ರಾಜ್ಯಾದ್ಯಂತ ವಕ್ಫ್ ಅದಾಲತ್ ನಡೆಸುತ್ತಿದ್ದು, ಇದು ಅತ್ಯಂತ ಗಂಭೀರವಾದ ವಿಷಯ. ಇವರಿಗೆ ಅಧಿಕಾರದ ಮದ ಏರಿದೆ. ತನ್ನ ಚಾಮರಾಜಪೇಟೆ ಕ್ಷೇತ್ರದಲ್ಲಿ 25‌ ಸಾವಿರಕ್ಕೂ ಅಧಿಕ ದೇಶದ್ರೋಹಿ ಬಾಂಗ್ಲಾ ಮುಸ್ಲಿಮರನ್ನು ಸಲಹುತ್ತಿದ್ದಾರೆ. ಈತನಿಂದಲೇ ರಾಜ್ಯದಲ್ಲಿ ಧಂಗೆ, ಗಲಭೆ ನಡೆಯುತ್ತಿವೆ. ಬಿಜೆಪಿ ಸೇರಿದಂತೆ ಹಲವರು ಜಮೀರ್‌ ಅವರಿಗೆ ಸಚಿವ ಸಂಪುಟದಿಂದ ಕೈಬಿಡಬೇಕು, ದೇಶದಿಂದ ಗಡೀಪಾರು ಎಂಬಿತ್ಯಾದಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ನಾನು ಹೇಳುವೆ ಈ ಕೂಡಲೇ ಅವನನ್ನು ಬಂಧಿಸಿ, ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಇಸ್ಲಾಂ ದೇಶ ಮಾಡುತ್ತಿದ್ದಾರೆ:

ಇಡೀ ದೇಶದಲ್ಲಿ ರೈತರ ಭೂಮಿಗಳು,‌ ಮನೆ, ಮಠ, ಸರ್ಕಾರಿ ಆಸ್ಪತ್ರೆ, ಕಚೇರಿ, ರಸ್ತೆಗಳು ವಕ್ಫ್‌ಗೆ ಹೋಗುತ್ತಿವೆ. ಇದು ದೇಶಾದ್ಯಂತ ವೈರಸ್ ರೀತಿ ಹರಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಗೂಳಿಯಂತೆ ನುಗ್ಗುತ್ತಿರುವುದು ನೋಡಿದರೆ ದೇಶಕ್ಕೆ ಗಂಡಾಂತರ ಸೃಷ್ಟಿಯಾಗಿದೆ. ದೇಶವನ್ನು ಇಸ್ಲಾಂ ದೇಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಸಮಗ್ರ ತನಿಖೆಯಾಗಲಿ:

ರಾಜ್ಯದಲ್ಲಿನ ಕೆಲ‌ವು ಮುಸ್ಲಿಂ ಜಿಲ್ಲಾಧಿಕಾರಿ, ತಹಸೀಲ್ದಾರ್‌, ನೋಂದಣಾಧಿಕಾರಿ, ಪಿಡಿಒಗಳು ತಾವು ಸಲ್ಲಿಸುತ್ತಿರುವ ಪ್ರದೇಶಗಳಲ್ಲಿ ವಕ್ಫ್ ಬೋರ್ಡ್ ಹೆಸರಲ್ಲಿ ಅಮಾಯಕರ ಆಸ್ತಿ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಠಾಧೀಶರು ಬೀದಿಗಿಳಿಯಲಿ:

ರಾಜ್ಯದಲ್ಲಿ 32 ಸಾವಿರಕ್ಕೂ ಅಧಿಕ ಮಠ-ಮಂದಿರಗಳಿವೆ.‌ ದೇಶವೇ ಇಂದು ಅಸುರಕ್ಷತೆಯ ಸಂಕಷ್ಟದಲ್ಲಿದ್ದು, ಎಲ್ಲ ಮಠಾಧೀಶರು ಪಾಠ, ಪ್ರವಚನಕ್ಕೆ ಮಾತ್ರ ಸೀಮಿತರಾಗದೆ ದೇಶ ಮತ್ತು ಧರ್ಮ ರಕ್ಷಣೆಗಾಗಿ ಬೀದಿಗಿಳಿದು ಹೋರಾಟ ಮಾಡಬೇಕು.‌ ಹಾಗೆ ಮಾಡಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಗುಡುಗಿದರು.

ಎಲ್ಲರೂ ಬೆಂಬಲಿಸಿ:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ನಿರ್ಧಾರಕ್ಕೆ ಶ್ರೀರಾಮಸೇನೆ ಸ್ವಾಗತಿಸುತ್ತದೆ. ದೇಶದ ಎಲ್ಲ ಹಿಂದೂಗಳು ಒಂದಾಗಿ ಈ ವಕ್ಫ್‌ ವಿರುದ್ಧ ಹೋರಾಡಿದರೆ ಮಾತ್ರ ನಮ್ಮ ಉಳಿವು ಸಾಧ್ಯವಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಎಲ್ಲ ಹಿಂದೂ ಬಾಂಧವರು ಬೆಂಬಲ ನೀಡಬೇಕು ಎಂದರು.

ನಾಚಿಕೆಗೇಡಿನ ಸಂಗತಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ನೀತಿಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗಿರುವುದು ನಾಚಿಕೆಗೇಡಿನ ಸಂಗತಿ. ಓರ್ವ ಅಪರಾಧಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ತನಿಖೆಗೆ ಹೋದರೆ ನ್ಯಾಯಯುತ ತನಿಖೆ ನಡೆಯಲು ಹೇಗೆ ಸಾಧ್ಯ? ವಿಚಾರಣೆಗೆ ಹೋಗುವ ಮುನ್ನ ರಾಜೀನಾಮೆ ಕೊಟ್ಟು ಶ್ರೀಸಾಮಾನ್ಯರಂತೆ ಹೋಗುವ ಮೂಲಕ ತಮ್ಮ ಘನತೆ ಉಳಿಸಿಕೊಳ್ಳಬೇಕಿತ್ತು ಎಂದು ಕಿಡಿಕಾರಿದರು.