ಯಮನೂರೇಶ್ವರ ಜಾತ್ರೆಯಲ್ಲಿ ಗಮನ ಸೆಳೆದ ಜಂಗೀ ಕುಸ್ತಿ

| Published : Apr 02 2024, 01:01 AM IST

ಸಾರಾಂಶ

ಬಸವನಬಾಗೇವಾಡಿ: ಪಟ್ಟಣದ ಸಮೀಪದ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯ ಅಂಗವಾಗಿ ಭಾನುವಾರ ಜಂಗೀ ಕುಸ್ತಿ ಸೇರಿದಂತೆ ವಿವಿಧ ಕಸರತ್ತಿನ ಸ್ಪರ್ಧೆಗಳು ಗಮನ ಸೆಳೆದವು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಪಟ್ಟಣದ ಸಮೀಪದ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯ ಅಂಗವಾಗಿ ಭಾನುವಾರ ಜಂಗೀ ಕುಸ್ತಿ ಸೇರಿದಂತೆ ವಿವಿಧ ಕಸರತ್ತಿನ ಸ್ಪರ್ಧೆಗಳು ಗಮನ ಸೆಳೆದವು.

ಬೆಳಗ್ಗೆ ನಡೆದ ಕಸರತ್ತಿನ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಕುಸ್ತಿ ಪೈಲ್ವಾನರು ಭಾಗವಹಿಸಿ ಶಕ್ತಿ ಪ್ರದರ್ಶಿಸಿದರು. ಸಾಗ ಕಲ್ಲೆತ್ತುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿನ ಆಸಂಗಿ ಗ್ರಾಮದ ಅಫ್ಜಲ್ ಖಾನ್‌ ಮುಜಾವರ್‌ ಪ್ರಥಮ ಸ್ಥಾನ, ರಿಯಾಜ್‌ ಜಮಾದಾರ ದ್ವಿತೀಯ ಸ್ಥಾನ, ರಾಜು ತಾಳಿಕೋಟಿ ತೃತೀಯ ಸ್ಥಾನ ಪಡೆದುಕೊಂಡರು. ಒತ್ತುಗಲ್ಲು ಸ್ಪರ್ಧೆಯಲ್ಲಿ ಶಿವಾನಂದ ಗೋಕಾಕ ಪ್ರಥಮ ಸ್ಥಾನ, ವಿಠ್ಠಲ ಮನ್ನಿಕೇರಿ ದ್ವಿತೀಯ ಸ್ಥಾನ, ಮುತ್ತಪ್ಪ ಮತ್ತು ಸಂತೋಷ ತೃತೀಯ ಸ್ಥಾನ ಪಡೆದರು.

ಸಂಜೆ ಜರುಗಿದ ಜಂಗೀ ಕುಸ್ತಿ ಸ್ಪರ್ಧೆಯಲ್ಲಿ ದ್ಯಾಬೇರಿ, ಮಾಲ, ಸೋಲಾಪುರ, ನಿಪ್ಪಾಣಿ, ಲಚ್ಯಾಣ, ನಿಂಬಾಳ, ಹೊರ್ತಿ, ಚಾಂದಕೋಟೆ, ವಿಜಯಪುರ, ಮಸ್ಕಿ, ಇಂಡಿ, ಸೇರಿದಂತೆ ವಿವಿಧೆಡೆಗಳಿಂದ ಜಟ್ಟಿಗಳು ಭಾಗವಹಿಸಿದ್ದರು. ಜಂಗೀ ಕುಸ್ತಿ ನೋಡುಗರನ್ನು ರೋಮಾಂಚನಗೊಳಿಸಿತು. ಕಡೆ ಕುಸ್ತಿ ದ್ಯಾಬೇರಿಯ ಗೋಪಾಲ ಹಾಗೂ ಉಮದಿಯ ಅಶೋಕ ನಡುವೆ ನಡೆದಿದ್ದು, ದ್ಯಾಬೇರಿಯ ಗೋಪಾಲ ಜಯಶಾಲಿಯಾಗಿ ನಗದು ₹ 5 ಸಾವಿರ ಹಾಗೂ ಬೆಳ್ಳಿ ಕಡಗ ತಮ್ಮದಾಗಿಸಿಕೊಂಡರು.

ಎರಡು ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಸತ್ಯಪ್ಪ ಬಂಡಿವಡ್ಡರ, ಅಂಬರೀಶ ಬೆಲ್ಲದ, ಪ್ರಭು ಚವ್ಹಾಣ, ಚಂದ್ರಶೇಖರ ಮುಳವಾಡ, ಚಂದ್ರಶೇಖರ ಮರೋಳ, ಮಹೇಶ ಮುಳವಾಡ, ಶರಣು ಮರೋಳ, ಹೈದರ ಸುತಾರ, ಯಮನೂರಿ, ಪೂಜಾರಿ, ಮಹಾಂತೇಶ ಗೌರಾ, ಬಾಬು ಚಪ್ಪರಬಂದ, ಬಂದೇನವಾಜ್‌ ವಾಲೀಕಾರ, ಬಸನಗೌಡ ಬಿರಾದಾರ, ಬಸಯ್ಯ ಶೀಕಳವಾಡಿ, ಶಂಕ್ರೆಪ್ಪ ಪೂಜಾರಿ, ಧರ್ಮಣ್ಣ ಪೂಜಾರಿ, ಗಿರಿಯಪ್ಪ ಹೆಬ್ಬಾಳ, ಶಿವಾನಂದ ಬೆಣ್ಣೂರ, ಖಾಜೇಸಾಬ ವಾಲೀಕಾರ, ಶಿವಾನಂದ ಬೆಲ್ಲದ, ಮಂಜುನಾಥ ಮುಳವಾಡ, ಶಿವಪ್ಪ ನಂದಿಹಾಳ, ಮಹಬೂಬ ಲೋದಿ, ಮಲ್ಲಪ್ಪ ಬೊಮ್ಮಣಗಿ, ಚಾಂದು ಚಪ್ಪರಬಂದ, ರಫೀಕ್‌ ವಾಲೀಕಾರ, ಅಪ್ಪು ಲಮಾಣಿ, ನೇಮು ಲಮಾಣಿ, ಲಕ್ಷ್ಮಣ ಬಂಡಿವಡ್ಡರ, ರಮೇಶ ನಿಡಗುಂದಿ, ರಿಯಾಜ ಅವಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ರಾತ್ರಿ ನವಲಗುಂದ ತಾಲೂಕಿನ ನಾಗನೂರಿನ ಇಮಾಮಸಾಬ್‌ ಒಲೆಪ್ಪನವರ ಅವರಿಂದ ಭಾವೈಕ್ಯತೆಯ ಜಾನಪದ ಗೀತೆಗಳು ನಡೆದವು. ಜಾತ್ರೆ ಅಂಗವಾಗಿ ಸೋಮವಾರ ಬೆಳಗ್ಗೆ ೯ ಗಂಟೆಗೆ ೫೫ ಎಚ್‌ಪಿ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ, ರಾತ್ರಿ ೧೦.೩೦ ಗಂಟೆಗೆ ಸಿಡಿದೆದ್ದ ಸೂರ್ಯಚಂದ್ರ ನಾಟಕ ಪ್ರದರ್ಶನವಿದೆ ಎಂದು ಜಾತ್ರಾ ಕಮಿಟಿ ಸದಸ್ಯರು ತಿಳಿಸಿದರು.