ನಿವೇಶನ ರಹಿತರಿಗೆ ನಿವೇಶನ ಹಕ್ಕುಪತ್ರ, ಮೂಲಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸುದೀರ್ಘ ಆರು ಗಂಟೆಗಳ, 13 ಕಿ.ಮೀ. ಕಾಲ್ನಡಿಗೆ ಜಾಥಾ ನಡೆಯಿತು.

ವೇಶನ ರಹಿತರಿಗೆ ನಿವೇಶನ ಹಕ್ಕುಪತ್ರ, ಮೂಲಸೌಲಭ್ಯ ಒದಗಿಸಲು ಒತ್ತಾಯ

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ನಿವೇಶನ ರಹಿತರಿಗೆ ನಿವೇಶನ ಹಕ್ಕುಪತ್ರ, ಮೂಲಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸುದೀರ್ಘ ಆರು ಗಂಟೆಗಳ, 13 ಕಿ.ಮೀ. ಕಾಲ್ನಡಿಗೆ ಜಾಥಾ ನಡೆಯಿತು.

ಹೈಸೂಡ್ಲೂರು ಗ್ರಾಮದಿಂದ ಪೊನ್ನಂಪೇಟೆ ತಾಲೂಕು ಕಚೇರಿ ಆಡಳಿತದ ಮುಂಭಾಗದ ವರೆಗೆ ಕಾಲ್ನಡಿಗೆ ಜಾಥಾ ನಡೆಸಿ ತಹಸೀಲ್ದಾರ್ ಮೋಹನ್ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್. ಗೋವಿಂದಪ್ಪ, ಮೈಸೂರು ವಿಭಾಗ ಸಂಚಾಲಕ ಕೃಷ್ಣಪ್ಪ ನೇತೃತ್ವದಲ್ಲಿ ರಾಜ್ಯ ಸಂಚಾಲಕರು, ಜಿಲ್ಲಾ ಸಂಚಾಲಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.ಮನವಿ ಸಂದರ್ಭ ರಾಜ್ಯ ಸಂಚಾಲಕ ಡಿ.ಆರ್. ಪಾಂಡುರಂಗ ಸ್ವಾಮಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 11645 ಕುಟುಂಬಗಳಿಗೆ ನಿವೇಶನಗಳಿಲ್ಲ. ಸಾವಿರಾರು ಕುಟುಂಬಗಳು ಮೇಲ್ವರ್ಗದ ತೋಟದ ಲೈನ್ ಮನೆಗಳಲ್ಲಿ ವಾಸವಾಗಿದ್ದಾರೆ. ಮೂಲಸೌಲಭ್ಯಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಮಹಿಳೆಯರು ಅಪೌಷ್ಟಿಕತೆಯಿಂದ ಅನಾರೋಗ್ಯಕ್ಕೊಳಗಾಗಿದ್ದಾರೆ. ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಒಳಗಾಗಿ ಬಲತ್ಕಾರದ ಬಾಲ್ಯ ವಿವಾಹ ಮತ್ತು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಶ್ರೀಮಂತರಿಂದ ಈ ಬಡವರ್ಗದವರಿಗೆ ಸೂಕ್ತ ಕಾನೂನು ಕ್ರಮ ಸಾಧ್ಯವಾಗುತ್ತಿಲ್ಲ ಎಂದು ಮನವಿ ಪತ್ರದಲ್ಲಿರುವ ಅಂಶಗಳನ್ನು ಉಲ್ಲೇಖಿಸಿದರು.ರಾಜ್ಯ ಸಂಘಟನಾ ಸಂಚಾಲಕ ಕೋಡಿಗಲ್ ರಮೇಶ್ ಮಾತನಾಡಿ, ಸರ್ಕಾರ ಕೈಗೊಂಡಿರುವ ಭೋಗ್ಯಕ್ಕೆ ಕೊಡುವ ನಿರ್ಧಾರ ದಲಿತರ, ನಿವೇಶನ ರಹಿತರ, ಬಡವರ, ಕೂಲಿ ಕಾರ್ಮಿಕ ವಿರೋಧಿ ಕಾನೂನಾಗಿದೆ. ಇದನ್ನು ತಕ್ಷಣವೇ ರದ್ದುಪಡಿಸಬೇಕು. ಅತಿಕ್ರಮಣಗೊಂಡ ಸರ್ಕಾರ ಪೈಸಾರಿ ಜಾಗವನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಬೇಕೆಂದು ಒತ್ತಾಯಿಸಿದರು.ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್. ಗೋವಿಂದಪ್ಪ ಮಾತನಾಡಿ, ಹೈಸೊಡ್ಲೂರಿನ ಸರ್ಕಾರಿ ಪೈಸಾರಿ ಜಾಗದಲ್ಲಿ ಎಂಟು ಎಕರೆ ಜಾಗ ಪರಿಶಿಷ್ಟ ವರ್ಗದವರ ನಿವೇಶನಕ್ಕಾಗಿ ಮೀಸಲಿಟ್ಟಿದ್ದೆ, ಅದನ್ನು ಶ್ರೀಮಂತ ತೋಟ ಮಾಲೀಕರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಉಳಿದ ಮುಕ್ಕಾಲು ಎಕ್ಕರೆ ಜಾಗದಲ್ಲಿ ನಿವೇಶನ ರಹಿತರು ಗುಡಿಸಲು ಕಟ್ಟಿಕೊಂಡು ಶೋಚನೀಯ ಬದುಕು ನಡೆಸುತ್ತಿದ್ದಾರೆ. ಅವರಿಗೆ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಹಕ್ಕು ಪತ್ರ ಯಾವ ಸೌಕರ್ಯವನ್ನು ನೀಡಿಲ್ಲ. ತೋಟದ ಮಾಲೀಕ ಅಮಾಯಕ ಜನಗಳ ಮೇಲೆ ದೈಹಿಕ ಹಲ್ಲೆ ನಡೆಸುತ್ತಾ ಕಿರುಕುಳ ನೀಡುತ್ತಿದ್ದಾರೆ ಎಂದರು.ಕೆ.ಬಾಡಗ, ಅರ್ಜಿ ಗ್ರಾಮದಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಈ ಬಗ್ಗೆ ಕಾಳಜಿ ಹೊಂದಿ ಅತಿಕ್ರಮಣಗೊಂಡ ಜಾಗವನ್ನು ತರವುಗೊಳಿಸಿ ನಿವೇಶನ ರಹಿತರಿಗೆ ಹಂಚಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಚಿಕ್ಕಮಗಳೂರು ರಾಜ್ಯಸಂಘಟನಾ ಸಂಚಾಲಕ ತರಿಕೆರೆ ವೆಂಕಟೇಶ್, ಸಂಚಾಲಕಿ ಭವನಿ, ದಾವಣಗೆರೆ ಜಿಲ್ಲಾ ಸಂಚಾಲಕ ಶ್ರೀನಿವಾಸ, ಚಿತ್ರದುರ್ಗ ಜಿಲ್ಲಾ ಸಂಚಾಲಕ ದಿವಾಕರು ಮತ್ತು ಎಚ್.ಆರ್. ಸತೀಶ್ ಸಿಂಗಿ, ಎಸ್.ಟಿ. ಗರೀಶ್, ಎನ್‌ಎನ್ ನಾಗೇಂದ್ರ, ಪಿ.ಎಸ್. ಮುತ್ತ, ವಿಜಯನ್, ಗಣೇಶ್, ತಂಗರಾಜು, ನಿತೀಶ್ ಎಚ್.ಜಿ. ಸೇರಿದಂತೆ ಹಲವರು ಭಾಗವಹಿಸಿದ್ದರು.