ಸಾರಾಂಶ
ಸ್ವಾತಂತ್ರ್ಯಕ್ಕೂ ಮುನ್ನ ಪದವೀಧರರು, ಶ್ರೀಮಂತರಿಗೆ ಮತದಾನದ ಹಕ್ಕಿತ್ತು. ಆದರೆ, ಸಂವಿಧಾನದಲ್ಲಿ 18 ವರ್ಷ ತುಂಬಿದ ಮಹಿಳೆ- ಪುರುಷನಿಗೂ ಮತದಾನದ ಹಕ್ಕನ್ನು ಕಲ್ಪಿಸಿದರು
ಕನ್ನಡಪ್ರಭ ವಾರ್ತೆ ಮೈಸೂರು
ದಲಿತ ವರ್ಗಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಸೀಮಿತವಾದ ನಾಯಕರಲ್ಲ. ಎಲ್ಲಾ ವರ್ಗಗಳ ನಾಯಕರಾಗಿದ್ದಾರೆ ಎಂಬುದನ್ನು ಅರಿಯಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ನಗರ ಹೊರ ವರ್ತುಲ ರಸ್ತೆಯ ಜಯದೇವನಗರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ದಲಿತ ವರ್ಗಕ್ಕೆ ಸೀಮಿತವಾಗಿಲ್ಲ. ಅವರೊಬ್ಬ ಎಲ್ಲಾ ವರ್ಗಗಳ ಹಿತ ಚಿಂತಕ. ಸಂವಿಧಾನದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ, ಸಮಾನತೆ ಸಿಗಬೇಕೆಂದು ಪ್ರತಿಪಾದಿಸಿದ್ದನ್ನು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು. ಸ್ವಾತಂತ್ರ್ಯಕ್ಕೂ ಮುನ್ನ ಪದವೀಧರರು, ಶ್ರೀಮಂತರಿಗೆ ಮತದಾನದ ಹಕ್ಕಿತ್ತು. ಆದರೆ, ಸಂವಿಧಾನದಲ್ಲಿ 18 ವರ್ಷ ತುಂಬಿದ ಮಹಿಳೆ- ಪುರುಷನಿಗೂ ಮತದಾನದ ಹಕ್ಕನ್ನು ಕಲ್ಪಿಸಿದರು. ಸಾಮಾನ್ಯ ವ್ಯಕ್ತಿಯಿಂದ ಪ್ರಧಾನಿಗೂ ಒಂದೇ ಮತ ಎನ್ನುವಂತೆ ಮಾಡಿದರು. ಇಂದು ಗ್ರಾಪಂ ಅಧ್ಯಕ್ಷರಿಂದ ಪ್ರಧಾನಿ ಸ್ಥಾನದವರೆಗೂ ಆಯ್ಕೆಯಾಗಲು ಸಂವಿಧಾನವೇ ಕಾರಣ. ಜನಪ್ರತಿನಿಧಿಗಳ ಆಯ್ಕೆಯನ್ನು ಜನಸಾಮಾನ್ಯರ ವಿವೇಚನೆಗೆ ಬಿಡುವುದಕ್ಕೆ ಮತದ ಹಕ್ಕನ್ನು ಕಲ್ಪಿಸಿದರು ಎಂದು ಅವರು ಹೇಳಿದರು.ಪ್ರತಿಯೊಬ್ಬರೂಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಸ್ವಯಂ ಉದ್ಯೋಗದ ಕಡೆಗೆ ಗಮನ ಕೊಡಬೇಕು. ಸ್ವಂತ ಕಾಲಿನ ಮೇಲೆ ನಿಂತು ಮತ್ತೊಬ್ಬರಿಗೂ ಉದ್ಯೋಗ ಕೊಡಬೇಕು ಎಂದರು.ಪ್ರತಿಮೆ ನಿರ್ಮಾಣಜಯದೇವನಗರಕ್ಕೆ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಒಳಚರಂಡಿ, ಚರಂಡಿ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ. ಅಂಬೇಡ್ಕರ್ ಪ್ರತಿಮೆ, ಕಮಾನು ದ್ವಾರ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿರುವುದನ್ನು ಶೀಘ್ರ ನೆರವೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಮುಖಂಡರಾದ ಶಿವಕುಮಾರಸ್ವಾಮಿ, ಸೋಮಯ್ಯ, ರಮೇಶ್, ವಸಂತ, ಕುಮಾರ, ಬಾಬು, ಕೃಷ್ಣಯ್ಯ ಮೊದಲಾದವರು ಇದ್ದರು.