ಮಹಾಲಿಂಗಪುರದಲ್ಲಿ ಜೆಸಿಬಿ ಕಾರ್ಯಾಚರಣೆ

| Published : Apr 09 2025, 02:01 AM IST

ಸಾರಾಂಶ

ಮಂಗಳವಾರ ಬೆಳ್ಳಂಬೆಳಗ್ಗೆ ಮಹಾಲಿಂಗಪುರ ಪಟ್ಟಣದಲ್ಲಿ ಜೆಸಿಬಿಗಳು ಸದ್ದು ಮಾಡಿದ್ದು, ರಬಕವಿ-ಬನಹಟ್ಟಿ ತಹಸೀಲ್ದಾರ ಗಿರೀಶ್ ಸ್ವಾದಿ ನೇತೃತ್ವದಲ್ಲಿ ಕೆಂಗೇರಿ ಮಡ್ಡಿ ಬಡಾವಣೆಯ ಸಾಯಿ ಮಂದಿರ ಹಿಂದೆ ಅಕ್ರಮವಾಗಿ ಪುರಸಭೆ ಜಾಗೆಯಲ್ಲಿ ಶೆಡ್ ಗಳ ತೆರವು ಕಾರ್ಯಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮಂಗಳವಾರ ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ಜೆಸಿಬಿಗಳು ಸದ್ದು ಮಾಡಿದ್ದು, ರಬಕವಿ-ಬನಹಟ್ಟಿ ತಹಸೀಲ್ದಾರ ಗಿರೀಶ್ ಸ್ವಾದಿ ನೇತೃತ್ವದಲ್ಲಿ ಕೆಂಗೇರಿ ಮಡ್ಡಿ ಬಡಾವಣೆಯ ಸಾಯಿ ಮಂದಿರ ಹಿಂದೆ ಅಕ್ರಮವಾಗಿ ಪುರಸಭೆ ಜಾಗೆಯಲ್ಲಿ ಶೆಡ್ ಗಳ ತೆರವು ಕಾರ್ಯಾಚರಣೆ ನಡೆಯಿತು.

ಕಾರ್ಯಾಚರಣೆಗೆ ಅಗತ್ಯವಿರುವ ಜೆಸಿಬಿ, ಭದ್ರತೆಗೆ ಪೊಲೀಸ್ ಮತ್ತು ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ತಾಲೂಕಾಡಳಿತ ಸೋಮವಾರ ರಾತ್ರಿಯೇ ಸಿದ್ಧಗೊಳಿಸಿದ್ದರು. ಬೆಳಕು ಹರಿಯುವ ಮುನ್ನವೇ ಅಪಾರ ಸಂಖ್ಯೆಯ ಪೊಲೀಸ್ ಭದ್ರತೆಯಲ್ಲಿ ಜೆಸಿಬಿಗಳು ತೆರವು ಕಾರ್ಯಾಚರಣೆ ಆರಂಭಿಸಿದವು. ಇಲ್ಲಿ ₹5.6 ಲಕ್ಷ ವೆಚ್ಚ ಮಾಡಿ ಶೆಡ್‌ ಹಾಕಿಕೊಂಡು 5-6 ವರ್ಷಗಳಿಂದ ನೆಲೆಸಿದ್ದರು. 2-3 ಗಂಟೆಗಳಲ್ಲಿ ತಾಲೂಕು ಆಡಳಿತ ಕಾರ್ಯಾಚರಣೆ ನಡೆಸಿದ ಪರಿಣಾಮ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿತ್ತು

ಇದನ್ನು ತಡೆಯಲು ಸ್ಥಳೀಯರು ಪೊಲೀಸ್ ಅಧಿಕಾರಿಗಳು, ತಹಸೀಲ್ದಾರ್ ಮತ್ತು ಮುಖಂಡರ ಬಳಿ ಗೋಗರೆದರೂ ಇದ್ಯಾವುದಕ್ಕೂ ಕ್ಯಾರೆ ಎನ್ನದ ತಹಸೀಲ್ದಾರರು ಕಾರ್ಯಾಚರಣೆ ಮುಂದುವರಿಸಿದರು.

ಅತಿಕ್ರಮಣ ಮಾಡಿ ಹಾಕಿಕೊಂಡ ೨೯/೦೧ ಸರ್ವೆ ನಂಬರ್ ೩ ಎಕರೆ ೬ ಗುಂಟೆ ಖಾಲಿ ಬಿದ್ದ ಜಾಗೆ ಕಂದಾಯ ಇಲಾಖೆಗೆ ಸೇರಿದೆ.ಇಲ್ಲಿ ಮನೆ ಇಲ್ಲದ ೩೩ ಕುಟುಂಬಗಳು ಹಲವಾರು ವರ್ಷಗಳಿಂದ ಅನಧಿಕೃತವಾಗಿ ಪತ್ರಾಸ್ ಶೆಡ್ ನಿರ್ಮಿಸಿಕ್ಕೊಂಡು ಜೀವನ ಸಾಗಿಸುತ್ತಿದ್ದರು.

೨೦೨೪ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ ಮತ್ತು ಪುರಸಭೆಗೆ ಬರೆದ ಮನವಿಯಲ್ಲಿ ಈ ಅನಧಿಕೃತ ಶೆಡ್ ನಿರ್ಮಾಣದಲ್ಲಿ ಪ್ರಭಾವಿಗಳು ಹಣ ಮಾಡಿರುವ ಕೆಲವರು ಸ್ವಂತ ಮನೆ ಹೊಂದಿದ್ದು ಮತ್ತು ಸ್ಥಿತಿವಂತರಿದ್ದು ಇಲ್ಲಿಂದ ತೆರುವುಗೊಳಿಸಬೇಕು ಎಂದು ಮನವಿ ಮಾಡಲಾಗಿತ್ತು.