ರೈತ ಪರ ಜೆಡಿಎಸ್‌ ಕೆಲಸ ಮಾಡಿಲ್ಲ

| Published : Mar 30 2024, 12:47 AM IST

ಸಾರಾಂಶ

‘ಕೆಲವರು ರೈತರ ಮಕ್ಕಳು, ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ತಾರೆ, ಆದರೆ ರೈತರ ಪರ ಯಾವುದೇ ಕೆಲಸ ಮಾಡಿಲ್ಲ’ ಎಂದು ಗೌಡರ ಕುಟುಂಬದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಕಿಡಿಕಾರಿದರು. ಅರಸೀಕೆರೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಸಚಿವ ರಾಜಣ್ಣ ಕಿಡಿ । ತಾಲೂಕು ಕಾಂಗ್ರೆಸ್‌ನಿಂದ ಮುಖಂಡರು, ಕಾರ್ಯಕರ್ತರ ಸಭೆ । ತಪ್ಪು ಮಾಡಿದವರಿಗೆ ಮತ ಹಾಕಬೇಡಿ

ಕನ್ನಡಪ್ರಭ ವಾರ್ತೆ ಅರಸೀಕೆರೆ

‘ಕೆಲವರು ರೈತರ ಮಕ್ಕಳು, ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ತಾರೆ, ಆದರೆ ರೈತರ ಪರ ಯಾವುದೇ ಕೆಲಸ ಮಾಡಿಲ್ಲ’ ಎಂದು ಗೌಡರ ಕುಟುಂಬದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಕಿಡಿಕಾರಿದರು.

ಮೈಸೂರು ರಸ್ತೆಯ ಕಸ್ತೂರಿಬಾ ಶಿಬಿರದ ಆವರಣದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೆಲ ದಿನಗಳ ಹಿಂದೆ ಹಾಸನದಲ್ಲಿ ಕುಮಾರಸ್ವಾಮಿ, ಪ್ರಜ್ವಲ್ ತಪ್ಪು ಮಾಡಿದ್ದಾರೆ ಕ್ಷಮಿಸಿ ಎಂದು ಪದೇ ಪದೆ ಹೇಳಿದ್ದಾರೆ. ತಪ್ಪು ಮಾಡಿದ ವ್ಯಕ್ತಿಗೆ ಏಕೆ ಮತ ಹಾಕಬೇಕು ಎಂಬುದನ್ನು ಮತದಾರರು ಯೋಚಿಸಬೇಕು ಎಂದು ಹೇಳಿದರು.

‘ಲೋಕಸಭೆಯಲ್ಲಿ ನಿಮ್ಮ ಪರ ದನಿ ಎತ್ತದವರನ್ನು, ಜನಸಾಮಾನ್ಯರಿಗೆ, ಅಭಿವೃದ್ಧಿಗೆ ತೊಂದರೆ ಕೊಡುವವರನ್ನು ರಾಜಕೀಯದಿಂದ ದೂರ ಇಡಬೇಕು. ಮತದ ಮೂಲಕ ತಕ್ಕ ಪಾಠ ಕಲಿಸಿ, ಶ್ರೇಯಸ್ ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ಲೋಕಸಭಾ ಚುನಾವಣೆಯಲ್ಲಿ ಮತದಾರರು ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳನ್ನು ಗೌರವ ತಂದುಕೊಡಬೇಕು. ಗ್ರಾಮೀಣ ಜನರನ್ನು ಆರ್ಥಿಕವಾಗಿ ಮೇಲೆತ್ತಲೂ ಹಲವಾರು ಯೋಜನೆಗಳನ್ನು ರೂಪಿಸಿದ್ದು ಈ ಬರಗಾಲದಲ್ಲಿಯೂ ಕೂಡ ಕುಡಿಯುವ ನೀರು ಉದ್ಯೋಗ ದನಕರು ಮೇವಿಗೆ ತೊಂದರೆ ಆಗದಂತೆ ಜನರ ಕಷ್ಟಗಳನ್ನು ದೂರ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡಿ ಪಕ್ಷ ಬಲಿಷ್ಠವಾಗಲು ತಮ್ಮ ಸಂಪೂರ್ಣ ಬೆಂಬಲ ಬೇಕು’ ಎಂದು ವಿನಂತಿಸಿದರು

ಜಿಲ್ಲೆಯ ರಾಜಕಾರಣದಲ್ಲಿ ಪುಟ್ಟಸ್ವಾಮಿಗೌಡ, ಶ್ರೀಕಂಠೇಗೌಡ ಜಿಲ್ಲೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಒಬ್ಬ ಕ್ರಿಯಾಶೀಲ ವ್ಯಕ್ತಿಯಾಗಿದ್ದು ಅವರ ಗೆಲುವಿಗೆ ಕಾರ್ಯಕರ್ತರು ಹೋರಾಟ ಮಾಡಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಹಳ್ಳಿಗಾಡಿನ ಜನರ ಜೀವನ ನಡೆಸಲು ಅನುಕೂಲವಾಗಲು ಅಕ್ಕಿ, ಉಚಿತ ಬಸ್, ವಿದ್ಯಾನಿಧಿ, ವಿದ್ಯುತ್, ಮಹಿಳೆಯರಿಗೆ 2 ಸಾವಿರ ರು. ಹಣ ನೀಡಿದ್ದಾರೆ. ಅಲ್ಲದೇ ಈ ಬಾರಿಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ‌ ರೈತರ ಸಾಲಮನ್ನಾ ಆಗಲಿದೆ. ರೈತರ, ಜನರ ಬಗ್ಗೆ ಕಳಕಳಿ ಇರುವ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹಾಸನದಲ್ಲಿ ಭಾಷಣ ಮಾಡಿದ ವೇಳೆ ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ ಕ್ಷಮಿಸಿ ಎಂದು ಹೇಳಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಹಾಗಾಗಿ ಪ್ರಜ್ವಲ್ ರೇವಣ್ಣಗೆ ಯಾರು ಮತ ನೀಡಬೇಡಿ. ರೈತರಿಗಾಗಿ ಇವರು ಏನನ್ನು ಮಾಡಿಲ್ಲ ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ಇನ್ನಷ್ಟು ಅಭಿವೃದ್ಧಿ ಆಗಬೇಕು, ನಾನು ಮಂತ್ರಿ ಆಗಬೇಕು ಅಂದರೆ ಶ್ರೇಯಸ್ ಪಟೇಲ್‌ಗೆ ಓಟು ಹಾಕಿ. ಎದುರಾಳಿ ಅಭ್ಯರ್ಥಿಯನ್ನು ಹಿಂದೆ ನಾವೇ ಗೆಲ್ಲಿಸಿದೆವು, ಆದರೆ ೫ ವರ್ಷದಲ್ಲಿ ಒಮ್ಮೆಯೂ ಬಂದು ನಿಮ್ಮ ಮುಖ ನೋಡಲಿಲ್ಲ. ಜಿಲ್ಲೆಯಲ್ಲಿ ಒಂದೇ ಕುಟುಂಬಕ್ಕೆ ಸಾರ್ವಭೌಮತ್ವ ಕೊಟ್ಟಿದ್ದು ಸಾಕು, ಈ ಬಾರಿ ಶ್ರೇಯಸ್ ಗೆಲ್ಲಿಸಿ’ ಎಂದರು.

ದೇವೇಗೌಡರಿಗೆ ತಿರುಗೇಟು:

‘ಕೋಮುವಾದಿ ಪಕ್ಷದ ಜತೆಗೆ ದೇವೇಗೌಡರು ಹೋಗಲ್ಲಾ ಎಂದಿದ್ದರು, ಈಗ ನಿಮ್ಮ ಅನೈತಿಕ ಮೈತ್ರಿಯನ್ನು ಜನ ತಿರಸ್ಕಾರ ಮಾಡುತ್ತಾರೆ. ಜೂ.೪ ರಂದು ಗೊತ್ತಾಗಲಿದೆ. ನಿಮ್ಮ ರಾಜಕಾರಣದಿಂದ ಜಿಲ್ಲೆಯ ಜನ ನೊಂದಿದ್ದಾರೆ. ನಿಮ್ಮ ೬೦ ವರ್ಷದ ರಾಜಕೀಯದಲ್ಲಿ ಅರಸೀಕೆರೆಗೆ ನೀರು ಕೊಟ್ಟಿದ್ದೀರೇನ್ರಿ, ಅರಸೀಕೆರೆಯ ಹಳ್ಳಿಗಳಿಗೆ, ನಗರಕ್ಕೆ ಕುಡಿಯುವ ನೀರು ಕೊಟ್ಟಿದ್ದು ಸಿದ್ದರಾಮಯ್ಯ, ಅದಕ್ಕೋಸ್ಕರ ನಾನು ಕಾಂಗ್ರೆಸ್‌ಗೆ ಹೋಗಿದ್ದೇನೆ’ ಎಂದು ಎಚ್‌.ಡಿ.ದೇವೇಗೌಡರ ಆರೋಪಕ್ಕೆ ರಾಜಣ್ಣ ತಿರುಗೇಟು ನೀಡಿದರು.

ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿದರು. ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು, ಕಾಂಗ್ರೆಸ್ ಮುಖಂಡರಾದ ಗಂಜಿಗೆರೆ ಚಂದ್ರಶೇಖರ್, ಪಟೇಲ್ ಶಿವಪ್ಪ, ಬಾಣಾವರ ಶ್ರೀನಿವಾಸ್, ಮೋಹನ್ ಕುಮಾರ್, ಬಿಳಿ ಚೌಡಯ್ಯ, ವೆಂಕಟೇಶ್ ಇದ್ದರು.

ಅರಸೀಕೆರೆಯಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಮಾತನಾಡಿದರು.