ಸಾರಾಂಶ
ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟಿಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದಿಢೀರ್ ಆಗಿ ೩.೩೦ ರು.ವರೆಗೆ ತೈಲ ಬೆಲೆ ಏರಿಕೆ ಮಾಡಿದ್ದರಿಂದ ಜನ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಒಂದು ಕೈಯಲ್ಲಿ ಮತ್ತೊಂದು ಕೈಯಲ್ಲಿ ಜನರ ಜೇಬಿನಿಂದ ದುಪ್ಪಟ್ಟು ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಲೋಕಸಭೆ ಚುನಾವಣೆ ಎದುರಿಸಿತ್ತು. ಆದರೆ, ರಾಜ್ಯದಲ್ಲಿ ಜನ ಗ್ಯಾರಂಟಿ ನೋಡಿ ಮತ ಹಾಕಲಿಲ್ಲ ಎಂಬ ಹತಾಶೆಯಿಂದ ತೈಲ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕೂಡಲೇ ರಾಜ್ಯ ಸರ್ಕಾರವು ತೆರಿಗೆ ಹೆಚ್ಚಳದ ನಿರ್ಧಾರವನ್ನು ಹಿಂಪಡೆದು ರಾಜ್ಯದ ಜನರ ಹೊರೆಯನ್ನು ಇಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸಿದ್ದಬಸಪ್ಪ ಯಾದವ, ಶಿಗ್ಗಾಂವಿ ತಾಲೂಕು ಅಧ್ಯಕ್ಷ ಈರಣ್ಣ ನವಲಗುಂದ, ಜಿಲ್ಲಾ ಉಪಾಧ್ಯಕ್ಷ ಅಮಿರಾಜಾನ್ ಬೆಫಾರಿ, ಮೂಕನ್ನ ಪಡೆಪ್ಪನವರ, ಅಲ್ಪ ಸಂಖ್ಯಾತ ವಿಭಾಗದ ಜಿಲ್ಲಾ ಅಧ್ಯಕ್ಷ ಕತ್ತಲಸಾಬ್ ಬಣಗಾರ್, ಮಾರುತಿ ಮುಂಡರಗಿ, ಬಸನಗೌಡ ಸಿದ್ದಪ್ಪಗೌಡ್ರ, ವಿಠ್ಠಲ್ ಸುಣಗಾರ, ನಾಗರಾಜ ಅಜ್ಜನವರ, ಮುಕೇಶ ಅಗಸಿಬಾಗಿಲು, ಫಿರೋಜ್ ಪಠಾಣ, ಮಾಲತೇಶ ಬೇವಿನಹಿಂಡಿ, ರಮೇಶ ಮಾಕನೂರ, ಕರುಣ ಗೌಡರ, ಶಿವು ಕಡೂರು, ಮಹಮದ್ ಹಣಿಪಮುಲ್ಲಾ, ರಾಘವೇಂದ್ರ ಗಿರಿಯಪ್ಪನವರ, ಸುನೀಲ ಗುಡೆದ ಇತರರಿದ್ದರು.