ಸಾರಾಂಶ
ರೈಲ್ವೆ ಅಂಡರ್ಪಾಸ್ನಲ್ಲಿ ಮಳೆ ನೀರು ಭರ್ತಿ, ಕಾಮಗಾರಿ ತೊಡಕುಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ನಗರದಿಂದ ಜೆಪ್ಪಿನಮೊಗರು ನೇತ್ರಾವತಿ ಸೇತುವೆ ಹೆದ್ದಾರಿಯನ್ನು ಸಂಪರ್ಕಿಸುವ ಜೆಪ್ಪು ಮಾಹಾಕಾಳಿ ಪಡ್ಪುವಿನ ನಿರ್ಮಾಣ ಹಂತದ ಅಂಡರ್ಪಾಸ್ನಲ್ಲಿ ನೀರು ತುಂಬಿದ್ದು, ಕಾಮಗಾರಿಗೆ ತಡೆ ಉಂಟಾಗಿದೆ. ಕಾಮಗಾರಿ ಸ್ಥಳಕ್ಕೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮತ್ತಿತರರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜುಲೈ 15ರ ಸುಮಾರಿಗೆ ಅಂಡರ್ಪಾಸ್ನ ಒಂದು ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಸ್ಮಾರ್ಟ್ಸಿಟಿ ಅಧಿಕಾರಿಗಳು ಈ ವೇಳೆ ಭರವಸೆ ನೀಡಿದರು.
ಅಂಡರ್ಪಾಸ್ನಲ್ಲಿ ಮಳೆಯಿಂದಾಗಿ ನೀರು ತುಂಬಿದ್ದು, ಕಾಮಗಾರಿ ನಡೆಸಲು ತೊಡಕಾಗಿದೆ. ನೀರು ಖಾಲಿ ಮಾಡಿ ಕಾಮಗಾರಿ ಮುಂದುವರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಮಾರ್ಟ್ಸಿಟಿ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.ರೈಲ್ವೆ ಇಲಾಖೆ ಮತ್ತು ಸ್ಮಾರ್ಟ್ಸಿಟಿ ನಡುವೆ ಹೊಂದಾಣಿಕೆ ಕೊರತೆಯಿಂದ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಪುಷ್ಬಾಕ್ಸ್ಗಳನ್ನು ರೈಲು ಚಲಿಸುತ್ತಿದ್ದಾಗಲೇ ಯಶಸ್ವಿಯಾಗಿ ಅಳವಡಿಸಲಾಗಿದೆ. ಆದರೆ ಅಂಡರ್ಪಾಸ್ನಲ್ಲಿ ಕಾಂಕ್ರಿಟ್ ಕಾಮಗಾರಿ ಹಾಗೂ ಎರಡೂ ಕಡೆಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಬಾಕಿ ಇದೆ. ಪ್ರತ್ಯೇಕ ಪೈಪ್ಲೈನ್ ಮೂಲಕ ಅಂಡರ್ಬಾಸ್ನಲ್ಲಿರುವ ನೀರನ್ನು ಖಾಲಿ ಮಾಡಬೇಕಾಗಿದೆ. ಅಲ್ಲದೆ ಮೇಲ್ಭಾಗದಲ್ಲಿರುವ ಮೊಯ್ಲಿ ಕೆರೆಯಿಂದ ಒಸರು ನೀರು ಕೂಡ ಅಂಡರ್ಪಾಸ್ಗೆ ಬರುತ್ತಿದೆ. ಇವೆಲ್ಲವನ್ನು ಸೂಕ್ತವಾಗಿ ತೆರವುಗೊಳಿಸಿ ಕಾಮಗಾರಿ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭ ಸ್ಮಾರ್ಟ್ಸಿಟಿ ಅಧಿಕಾರಿ ಅರುಣ್ ಪ್ರಭ, ರೈಲ್ವೆ ಎಂಜಿನಿಯರ್ಗಳು, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರಿದ್ದರು. .........ಅಂಡರ್ಪಾಸ್ನಲ್ಲಿ ಅಂಡರ್ವಾಟರ್!
ಮೇ 19 ರಿಂದ ಸುರಿದ ಧಾರಾಕಾರ ಮಳೆಗೆ ನೀರು ತುಂಬಿ ಕಾಮಗಾರಿ ಸ್ಥಗಿತಗೊಳ್ಳುವಂತೆ ಆಗಿತ್ತು. ಪೂರ್ವನಿಗದಿಯಂತೆ 30 ಕೋಟಿ ರು. ರೇಲ್ವೆ ಹಾಗೂ 20 ಕೋಟಿ ರು. ಸ್ಮಾರ್ಟ್ಸಿಟಿ ಸೇರಿ ಒಟ್ಟು 50 ಕೋಟಿ ರು.ಗಳ ರೈಲ್ವೆ ಅಂಡರ್ಪಾಸ್ ಕಾಮಗಾರಿ 2024 ಜನವರಿಗೆ ಮುಕ್ತಾಯಗೊಳ್ಳಬೇಕಿತ್ತು. ತಾಂತ್ರಿಕ ಕಾರಣಗಳಿಂದ ಒಂದು ವರ್ಷ ವಿಳಂಬ ಬಳಿಕ ಮೇ ತಿಂಗಳಿಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಮುಂಗಾರು ಹಿಂಗಾರು ಮಳೆಯಿಂದಾಗಿ ಕಾಮಗಾರಿಯೇ ನಿಂತು ಹೋಗಿದೆ.ಒಳಚರಂಡಿ ಸಮಸ್ಯೆ:ಸ್ಮಾರ್ಟ್ಸಿಟಿ ಮಂಗಳೂರು ಮತ್ತು ರೈಲ್ವೆ ವಿಭಾಗ ಜಂಟಿಯಾಗಿ ಈ ಅಂಡರ್ಪಾಸ್ ಕಾಮಗಾರಿ ನಡೆಸುತ್ತಿದೆ. ರೈಲ್ವೆ ಕೆಳಸೇತುವೆಯ ಒಂದು ಭಾಗದಲ್ಲಿ ಸ್ಮಾರ್ಟ್ಸಿಟಿ ವತಿಯಿಂದ ನೀರು ಸರಾಗ ಹರಿದುಹೋಗಲು ಪೈಪ್ನ್ನು ಅಳವಡಿಸಲಾಗಿದೆ. ಇನ್ನೊಂದು ಬದಿಯಲ್ಲಿ ರೈಲ್ವೆ ವಿಭಾಗ ಪೈಪ್ ಅಳವಡಿಸಬೇಕು. ಆದರೆ ಮಳೆಗಾಲಕ್ಕಿಂತ ಮೊದಲೇ ಸುರಿದ ಭಾರಿ ಮಳೆ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.ಈಗ ರೈಲ್ವೆ ಅಂಡರ್ಪಾಸ್ನಲ್ಲಿ ನೀರು ನಿಂತು ಸರಾಗ ಹರಿಯಲು ಜಾಗ ಇಲ್ಲ. ಮಂಗಳವಾರದಿಂದ ರೈಲ್ವೆ ಅಧಿಕಾರಿಗಳು ಅಂಡರ್ಪಾಸ್ನಲ್ಲಿ ತುಂಬಿರುವ ನೀರು ಹೊರ ತೆಗೆಯಲು ಪೈಪ್ಲೈನ್ ಅಳವಡಿಗೆ ಮುಂದಾಗಿದ್ದಾರೆ. ಇದೇ ವೇಳೆ ಕಳೆದ ಎರಡು ದಿನಗಳಿಂದ ಎರಡ್ಮೂರು ಪಂಪ್ಗಳಲ್ಲಿ ಸ್ಮಾರ್ಟ್ಸಿಟಿ ವತಿಯಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಆದರೂ ನೀರು ಖಾಲಿಯಾಗುತ್ತಿಲ್ಲ.ಅಂಡರ್ಪಾಸ್ನ ಮೇಲ್ಭಾಗದಲ್ಲಿ ಹಳೆ ಮೊಯ್ಲಿ ಕೆರೆ ಇದೆ. ಈ ಕೆರೆಯನ್ನು ಪಾಲಿಕೆ ವತಿಯಿಂದ ಪುನಶ್ಚೇತನಗೊಳಿಸಲಾಗಿದೆ. ಈ ಕೆರೆಯಲ್ಲಿ ನೀರು ತುಂಬು ಕೆಳಭಾಗ ಅಂಡರ್ಪಾಸ್ಗೆ ಹರಿಯುತ್ತಿದೆ. ಈ ಕಾರಣಕ್ಕೂ ಅಂಡರ್ಪಾಸ್ನಲ್ಲಿ ನೀರು ಭರ್ತಿಯಾಗುತ್ತಿದೆ.ಅಂಡರ್ಪಾಸ್ನಲ್ಲಿ ನೀರು ನಿಂತಿರುವುದರಿಂದ ಯಾವುದೇ ಕಾಮಗಾರಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಒಂದು ಪಾರ್ಶ್ವದಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಸಲು ಆಗದ ಪರಿಸ್ಥಿತಿ. ಮಳೆಗಾಲದಲ್ಲಿ ಮಳೆ ನೀರಿನ ಅವಾಂತರ ಆಗುತ್ತದೆ ಎಂಬ ಅರಿವು ಇದ್ದೂ ರೇಲ್ವೆ ಹಾಗೂ ಸ್ಮಾರ್ಟ್ಸಿಟಿ ಅಧಿಕಾರಿಗಳು ಗಮನ ಹರಿಸಿಲ್ಲ ಎಂಬುದು ಸ್ಥಳೀಯರ ಆರೋಪ.ಅಂಡರ್ಪಾಸ್ನಲ್ಲಿ ನೀರು ನಿಂತಿದ್ದ ಕಡೆಗಳಲ್ಲಿ ಮಣ್ಣು ತುಂಬಿ ಕೆಸರಿನಂತಾಗಿದೆ. ಈ ಕೆಸರನ್ನು ತೆರವುಗೊಳಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.