ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಯುವ ಸಮುದಾಯಕ್ಕೆ ಉದ್ಯೋಗ, ಅಗತ್ಯವಾದ ಕೌಶಲ್ಯ, ಉದ್ಯಮಶೀಲತೆಗೆ ಪ್ರೋತ್ಸಾಹ ಮತ್ತು ಉದ್ಯೋಗ ಹುಡುಕುವ ಅವಧಿಯಲ್ಲಿ ನೆರವಾಗಲು ಯುವನಿಧಿ ಪ್ರೋತ್ಸಾಹಧನ ನೀಡುವ ಮೂಲಕ ರಾಜ್ಯದ ಯುವ ಸಮುದಾಯಕ್ಕೆ ಸುಭದ್ರ ಭವಿಷ್ಯ ಕಟ್ಟಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ 2 ದಿನಗಳ ‘ಯುವ ಸಮೃದ್ಧಿ ಸಮ್ಮೇಳನ, ಬೃಹತ್ ಉದ್ಯೋಗ ಮೇಳ -2024’ ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.
ಯುವ ಸಮುದಾಯಕ್ಕೆ ಕೆಲಸ ಸಿಕ್ಕರೆ ದೇಶದ ಭವಿಷ್ಯ ಭದ್ರವಾಗಿರುತ್ತದೆ. ಹೀಗಾಗಿ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಪಣ ತೊಟ್ಟಿದ್ದೇವೆ. ಅದಕ್ಕಾಗಿಯೇ ಈ ಮೇಳ ಆಯೋಜಿಸಲಾಗಿದೆ.
ಉದ್ಯೋಗ ಮೇಳಕ್ಕೆ 580 ಉದ್ಯೋಗದಾತರು 1 ಲಕ್ಷ ಉದ್ಯೋಗಾವಕಾಶಗಳನ್ನು ತಂದಿದ್ದಾರೆ. ಮೇಳಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ. ಇದೊಂದು ಐತಿಹಾಸಿಕ ಉದ್ಯೋಗ ಮೇಳವಾಗಿದೆ.
ಇದೇ ರೀತಿ ಕಲಬುರಗಿ, ಬೆಳಗಾವಿ, ಮೈಸೂರು ಮುಂತಾದ ಕಡೆಗಳಲ್ಲಿ ಪ್ರಾದೇಶಿಕ ಉದ್ಯೋಗ ಮೇಳಗಳನ್ನು ಆಯೋಜಿಸುತ್ತೇವೆ. ಇದು ನಿರಂತರ ಪ್ರಕ್ರಿಯೆ ಆಗಲಿದೆ ಎಂದು ಘೋಷಿಸಿದರು.
ಈಗ ಇರುವ ಜಿಟಿಟಿಸಿಗಳನ್ನು ಸಶಕ್ತಗೊಳಿಸುವ ಜೊತೆಗೆ ಹೊಸದಾಗಿ ಜಿಟಿಟಿಸಿ ಕೇಂದ್ರಗಳನ್ನು ಆರಂಭಿಸುತ್ತೇವೆ. ಎಂಜಿನಿಯರಿಂಗ್, ಡಿಪ್ಲೋಮಾ, ಐಟಿಐ ಮತ್ತು ಜಿಟಿಟಿಸಿಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ.
ಇಂದಿನ ಕಾಲದ ಉದ್ಯೋಗಗಳಿಗೆ ಯಾವ ರೀತಿಯ ಕೌಶಲ್ಯ ಬೇಕೋ ಅಂತಹ ಕೌಶಲ್ಯ ನೀಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇಂದು ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. 2014-15ರಲ್ಲಿ 2.1ರಷ್ಟು ಇದ್ದ ನಿರುದ್ಯೋಗ ಪ್ರಮಾಣ, ಈಗ ಶೇ.8.40ಕ್ಕೆ ಏರಿಕೆಯಾಗಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಪ್ರ
ಧಾನಿ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಹೇಳಿದ್ದರು. ಅದರಂತೆ 10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ಕೊಡಬೇಕಿತ್ತು. ದುರಾದೃಷ್ಟವಶಾತ್ ಕೊಟ್ಟ ಮಾತಿನಂತೆ ನಡೆಯಲಿಲ್ಲ. ನಿರುದ್ಯೋಗ ಹೆಚ್ಚಾಗುವಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಟೀಕಿಸಿದರು.
ಯುವನಿಧಿ ಯೋಜನೆ ಮೂಲಕ ಪದವೀಧರರು ಮತ್ತು ಡಿಪ್ಲೋಮಾ ಮುಗಿಸಿದವರಿಗೆ ಕ್ರಮವಾಗಿ ₹3,000 ಮತ್ತು ₹1,500 ಕೊಡುತ್ತಿರುವ ಕಾರಣ ಉದ್ಯೋಗ ಹುಡುಕುವ ಅವಧಿಯಲ್ಲಿ ಸರ್ಕಾರ ನೆರವಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ, 10ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವೀಧರರೂ ಮೇಳಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ದೇಶದ ಬೃಹತ್ ಉದ್ಯೋಗ ಮೇಳವಿದು. 600 ಸ್ಟಾಲ್ಗಳಿವೆ.
ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಬೇಕಾದ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸಂದರ್ಶನವನ್ನು ನಡೆಸಲಾಗುತ್ತದೆ. ಉದ್ಯೋಗ ಸಿಗದಿದ್ದರೆ, ಅವರಿಗೆ ಕೌಶಲ್ಯ ತರಬೇತಿ ನೀಡಿ ಕೆಲಸ ಕೊಡಿಸುತ್ತೇವೆ. ಅದಕ್ಕಾಗಿ ಯುವನಿಧಿ ಪ್ಲಸ್ ಯೋಜನೆ ಆರಂಭಿಸಿದ್ದೇವೆ ಎಂದು ಹೇಳಿದರು.
ಸರ್ಕಾರದ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ 1.40 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಹಣ ಕೊಡುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ನಿರುದ್ಯೋಗ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪಾಟೀಲ್ ಟೀಕಿಸಿದರು.
ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆಎಸ್ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಲ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭರ್ಜರಿ ಸ್ಪಂದನೆ:ಉದ್ಯೋಗ ಮೇಳಕ್ಕೆ ಬೃಹತ್ ಸಂಖ್ಯೆಯಲ್ಲಿ ಯುವಕ-ಯುವತಿಯರು ಆಗಮಿಸಿದ್ದರು. ನೋಂದಣಿ ಮತ್ತು ಸಂದರ್ಶನ ಸ್ಟಾಲ್ಗಳು ತುಂಬಿ ತುಳುಕುತ್ತಿದ್ದವು.
ಹೊಸದಾಗಿ ಉದ್ಯೋಗ ಹುಡುಕುತ್ತಿರುವವರು, ಈಗಾಗಲೇ ಕೆಲಸ ಮಾಡುತ್ತಿರುವವರು ಕೂಡ ಇನ್ನಷ್ಟು ಉತ್ತಮ ಅವಕಾಶಕ್ಕಾಗಿ ಮೇಳಕ್ಕೆ ಆಗಮಿಸಿದ್ದರು.
‘ನಾನೀಗ ಟೊಯೋಟಾ ಕಿರ್ಲೋಸ್ಕರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅನುಭವದೊಂದಿಗೆ ಇನ್ನಷ್ಟು ಉತ್ತಮ ಉದ್ಯೋಗವಕಾಶಕ್ಕಾಗಿ ಮೇಳಕ್ಕೆ ಬಂದಿದ್ದೇನೆ. ಸಹೋದರಿ ಕೂಡ ಕೆಲಸಕ್ಕೆ ನೋಂದಾಯಿಸಿಕೊಂಡಿದ್ದಾರೆ’ ಎಂದು ಮೇಳಕ್ಕೆ ಆಗಮಿಸಿದ್ದ ಯುವಕ ದಿಕ್ಷಿತ್ ಹೇಳಿದರು.
ಮೇಳದಲ್ಲಿರುವ ಕಂಪನಿಗಳುಎಚ್ಸಿಎಲ್ ಟೆಕ್, ಫಾಕ್ಸ್ಕಾನ್, ಟೊಯೋಟಾ, ವಿಸ್ಟ್ರಾನ್, ಇನ್ಫೋಸಿಸ್, ಶಿಂಡ್ಲರ್ ಇಂಡಿಯಾ ಪ್ರೈ.ಲಿ, ಮೋಲಿಕ್ಸ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಎಲ್ಐಸಿ, ಬಯೋಕಾನ್ ಬಯಾಲಜೀಸ್, ಆಂಪ್ಲೇ ಟೆಕ್ನಾಲಜೀಸ್, ಮಹೀಂದ್ರಾ ಏರೋಸ್ಪೇಸ್, ಮೈನಿ ಪ್ರೇಸಿಷನ್ ಪ್ರಾಡಕ್ಟ್ಸ್, ನಂದಿ ಟೊಯೋಟಾ, ಟಾಟಾ ಸಮೂಹ ಸೇರಿದಂತೆ ಸುಮಾರು 580 ಕಂಪನಿಗಳು 1 ಲಕ್ಷ ಉದ್ಯೋಗವಕಾಶಗಳನ್ನು ತೆರೆದಿಟ್ಟಿವೆ ಎಂದು ಕೆಎಸ್ಡಿಸಿ ತಿಳಿಸಿದೆ.
ಉದ್ಯೋಗಕ್ಕಾಗಿ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು ಮತ್ತು ಆನ್ಲೈನ್ ಮೂಲಕ ನೋಂದಣಿಗೂ ಅವಕಾಶವಿದೆ. ವಿಳಾಸ- https://skillconnect.kaushalkar.com