ಸಾರಾಂಶ
ಗುಂಡ್ಲುಪೇಟೆ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ನ್ಯಾಯಾಧೀಶ ಶಿವಕುಮಾರ್ ಜಿ.ಜೆ ಸಸಿಗೆ ನೀರುಣಿಸಿದರು.
ಗುಂಡ್ಲುಪೇಟೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಪ್ರತಿ ತಾಲೂಕಿನಲ್ಲಿ ೧೦ ಸಾವಿರ ಸಸಿ ನೆಡುವಂತೆ ಗುರಿ ನೀಡಿದ್ದು, ತಾಲೂಕಿನ ಸಾರ್ವಜನಿಕರು ೧೦ ಸಾವಿರಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಬಸವರಾಜ ತಳವಾರ ಮನವಿ ಮಾಡಿದರು.
ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನೀರುಣಿಸಿ ಮಾತನಾಡಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರಾಜ್ಯದ ಪ್ರತಿ ತಾಲೂಕಿನಲ್ಲಿ ಕನಿಷ್ಠ ೧೦ ಸಾವಿರ ಸಸಿ ನೆಡುವ ಕಾರ್ಯಕ್ರಮ ನಡೆಸಬೇಕು ಎಂದು ಸೂಚನೆ ನೀಡಿದ್ದು, ತಾಲೂಕಿನ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಹಾಗೂ ಸಾರ್ವಜನಿಕರು ಜಮೀನು, ಮನೆಗಳ ಮುಂದೆ ಸಸಿ ನೆಟ್ಟು ಫೋಟೋವನ್ನು ತಾಲೂಕು ಕಾನೂನು ಸೇವೆಗಳ ಸಮಿತಿಗೆ ಕಳುಹಿಸಿ ಕೊಡಬೇಕು ಎಂದರು.ತಾಲೂಕಿನಲ್ಲಿ ಹತ್ತು ಸಾವಿರ ಸಸಿಗಳನ್ನು ಒಂದೇ ದಿನದಲ್ಲಿ ನೆಡಲು ಆಗುವುದಿಲ್ಲ. ೨ ತಿಂಗಳ ಅವಕಾಶ ಕಾನೂನು ಸೇವೆಗಳ ಪ್ರಾಧಿಕಾರ ಗಡುವು ನೀಡಿದ್ದು, ಅವಧಿಯೊಳಗೆ ಹತ್ತು ಸಾವಿರ ಸಸಿ ನೆಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಶಿವಕುಮಾರ್ ಜಿ.ಜೆ, ಅಪರ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಕಾಂತಮ್ಮ ಎ.ಎನ್, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ವೆಂಕಟೇಶ್, ಮದ್ದೂರು ವಲಯ ಅರಣ್ಯಾಧಿಕಾರಿ ಬಿ.ಎಂ. ಮಲ್ಲೇಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ರವಿ, ವಕೀಲರ ಸಂಘದ ಕಾರ್ಯದರ್ಶಿ ಬಿ.ಪಿ.ಪುಟ್ಟಸ್ವಾಮಿ ಇದ್ದರು.