ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ಪಟ್ಟಣದ ಶ್ರೀದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪೋಲಿಯೋ ಲಸಿಕೆ ಅಭಿಯಾನದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಹುಟ್ಟುವ ಪ್ರತಿಯೊಂದು ಮಗುವೂ ದೇಶದ ಸಂಪತ್ತು. ಮಗುವಿನ ಆರೋಗ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಬೆಳೆಯುವ ಮಕ್ಕಳನ್ನು ಬಾಧಿಸುವ ಮಾರಕ ರೋಗ ಪೋಲಿಯೋ. ಮಕ್ಕಳು ಅಂಗವೈಕ್ಯಲಕ್ಕೆ ಒಳಗಾಗಿ ಜೀವನ ಪರ್ಯಂತ ನರಳಬೇಕಾಗುತ್ತದೆ. ಇದರಿಂದ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ ಎಂದರು.

ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವುದರಿಂದ ಮಕ್ಕಳು ಆರೋಗ್ಯವಂತ ಬದುಕು ಸಾಗಿಸುತ್ತಾರೆ. ಆರೋಗ್ಯ ಇಲಾಖೆ 112 ಲಸಿಕಾ ಬೂತ್ ಗಳನ್ನು ತೆರೆದಿದೆ.5 ವರ್ಷದ ಒಳಗಿನ ಎಲ್ಲಾ ಮಕ್ಕಳಿಒಗೂ ಪೋಷಕರು ತಮ್ಮ ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ತಪ್ಪದೆ ಪೋಲಿಯೋ ಹನಿ ಹಾಕಿಸಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಡಾ.ಎಸ್.ಯು.ಅಶೋಕ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುಳಾ, ತಜ್ಞ ವೈದ್ಯರುಗಳು, ಆರೋಗ್ಯ ಪರಿವೀಕ್ಷಕ ಶೀಳನೆರೆ ಸತೀಶ್, ಔಷದ ವಿಭಾಗದ ಉಗ್ರಾಣಾಧಿಕಾರಿ ಸತೀಶ್ ಕುಮಾರ್ ಸೇರಿದಂತೆ ಸಿಬ್ಬಂದಿಗಳು ಮತ್ತು ಮಕ್ಕಳ ಪೋಷಕರು ಭಾಗವಹಿಸಿದ್ದರು.ಪೋಲಿಯೋ ಅಭಿಯಾನಕ್ಕೆ ಮೊದಲ ದಿನವೇ ಯಶಸ್ಸು

ಕೆ.ಆರ್.ಪೇಟೆ:

ತಾಲೂಕಿನಲ್ಲಿ ಇಂದಿನಿಂದ ಆರಂಭಗೊಂಡಿರುವ ಪೋಲಿಯೋ ಅಭಿಯಾನಕ್ಕೆ ಮೊದಲ ದಿನವೇ ಯಶಸ್ಸು ದೊರಕಿದೆ.

ತಾಲೂಕಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 16,199 ಮಕ್ಕಳನ್ನು ಗುರುತಿಸಿ ಅವುಗಳಿಗೆ ಪೋಲಿಯೋ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಂಡಿದ್ದು, ಮೊದಲ ದಿನವೇ ಇಲಾಖೆಗೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರಕಿದೆ. ಒಂದೇ ದಿನ 14,856 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.92 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್ ತಿಳಿಸಿದ್ದಾರೆ.

ಲಸಿಕೆ ಕಾರ್ಯಕ್ರಮದಿಂದ ದೂರ ಉಳಿದಿರುವ ಮಕ್ಕಳನ್ನು ಗುರುತಿಸಿ ನಾಳೆಯಿಂದ ಪ್ರತಿಯೊಂದು ಮನೆ ಬಾಗಿಲಿಗೂ ಹೋಗಿ ಪೋಲಿಯೋ ಹನಿ ಹಾಕುವ ಮೂಲಕ ಶೇ.100 ರಷ್ಟು ಯಶಸ್ಸು ಸಾಧಿಸಲಾಗುವುದು ಎಂದು ಹೇಳಿದ್ದಾರೆ.