ಕನ್ನಡಪ್ರಭ ವಾರ್ತೆ ಪಾಂಡವಪುರ

ಯುವಕರು ಸಂಘಟಿತರಾಗಿ ಹಳ್ಳಿಗಳನ್ನು ಅಭಿವೃದ್ಧಿ ಪಡಿಸಿ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮುಂದಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಸಣಬದಕೊಪ್ಪಲು ಗ್ರಾಮದಲ್ಲಿ ದೊಡ್ಡೇಗೌಡನಕೊಪ್ಪಲು-ಸಣಬದ ಕೊಪ್ಪಲು ಮಾರ್ಗವಾಗಿ ಕಡಬ ಸಂಪರ್ಕಿಸುವ ರಸ್ತೆ 6.18 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಹಳ್ಳಿಗಳನ್ನು ಅಭಿವೃದ್ಧಿಪಡಿಸಿ ರೈತರು ಆರ್ಥಿಕವಾಗಿ ಸಂಘಟಿತರನ್ನಾಗಿ ಮಾಡಲು ಯುವಕರು ಮುಂದಾಗಬೇಕು. ರೈತರು ಬೆಳೆಯುವ ಬೆಳೆಪದ್ದತಿಯನ್ನು ಬದಲಾಯಿಸಿ ಸಾವಯವ ಪದ್ದತಿಯಲ್ಲಿ ಬೇಸಾಯ ಮಾಡುವ ಕಡೆಗೆ ಮುಖ ಮಾಡುವಂತೆ ಮಾಡಬೇಕು ಎಂದರು.

ರಾಜ್ಯ ಸರಕಾರ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಎಂಬುದಾಗಿ ಘೋಷಣೆ ಮಾಡಿದೆ. ಇದು ಇನ್ನೂ ಕೆಲವರಿಗೆ ಅರಿವಿಲ್ಲ. ರೈತರು ಸಾವಯವ ಕೃಷಿ ಪದ್ದತಿ ಕಡೆಗೆ ಮುಂದಾಗಬೇಕು ಎಂದರು.


ತೊಣ್ಣೂರುಕೆರೆಯಲ್ಲಿ ನೀರೆತ್ತಲು ನಿಲ್ಲಿಸಬೇಡಿ. ನೀರು ತೆಗೆಯಲು ಅವಕಾಶ ನೀಡುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಲಾಗಿದೆ. ನಮ್ಮ ಹಿರಿಯರು ಕಟ್ಟಿಸಿರುವ ಕೆರೆಕಟ್ಟೆಗಳು ಒತ್ತುವರಿಯಾಗಿವೆ. ಕೆರೆಗೆ ಬರುವ ನಾಲೆಗಳನ್ನು ಮುಚ್ಚುತ್ತಿದ್ದಾರೆ. ನೀರಿನ ಅಭಾವ ಎಷ್ಟಿದೆ ಎನ್ನುವುದನ್ನು ಜನತೆ ಅನುಭವಿಸುತ್ತಿದ್ದಾರೆ. ಹಿರಿಯರು ಮಾಡಿಕೊಟ್ಟಂತಹ ಕೆರೆಕಟ್ಟೆ, ನಾಲೆ-ಹಳ್ಳಗಳನ್ನು ಸಂರಕ್ಷಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಸಣಬಕೊಪ್ಪಲು ಸಂಪರ್ಕ ರಸ್ತೆಯೂ ಸಂಪೂರ್ಣ ಹದಗೆಟ್ಟಿತ್ತು. ಇದೀಗ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಒಗ್ಗಟ್ಟಿನಲ್ಲಿ ನಿಂತು ರಸ್ತೆ ಕೆಲಸ ಮಾಡಿಸಿಕೊಳ್ಳಿ ಎಂದರು.

ಇದೇ ವೇಳೆ ಗ್ರಾಮದ ಯುವಕರು ಹಲವಾರು ಬೇಡಿಕೆಗಳನ್ನು ಶಾಸಕರಿಗೆ ತಿಳಿಸಿದರು. ಹಲವಾರು ಯುವಕರು ರೈತಸಂಘದ ಸೇರ್ಪಡೆಗೊಂಡರು. ರೈತ ಸಂಘದ ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೂಪನಿತಿನ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ,ಸ್ವಾಮೀಗೌಡ, ಚಲುವೇಗೌಡ, ಜಯರಾಮು, ಪ್ರಕಾಶ್, ಬೋರೇಗೌಡ, ಡೇರಿಕುಮಾರ್, ನ್ಯಾಯಬೆಲೆ ಶಿವರಾಮು, ಸಣಬ ಬೆಟ್ಟೇಗೌಡ, ಶ್ರೀಧರ್ ಸೇರಿದಂತೆ ಯುವಕರು, ಮುಖಂಡರು ಹಾಜರಿದ್ದರು.