ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯನ್ವಯ ನೇಮಕಗೊಂಡಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮೈಸೂರು ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕಾರ್ಯ ಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಸಲುವಾಗಿ ಗ್ಯಾರೇಜುಗಳು, ಗುಜರಿ, ಕಸ ವಿಲೇವಾರಿ ಘಟಕ ಮುಂತಾದ ಬಾಲ/ ಕಿಶೋರ ಕಾರ್ಮಿಕರು ಹೆಚ್ಚಾಗಿ ಕಂಡುಬರುವಂತಹ ಸ್ಥಳಗಳಲ್ಲಿ ಹೆಚ್ಚು ತಪಾಸಣೆ ನಡೆಸಿ ದುಡಿಮೆಯಲ್ಲಿ ತೊಡಗಿರುವ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ವಲಸೆ ಕಾರ್ಮಿಕರ ಜೊತೆ ಬಂದಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಅಂತಹ ಮಕ್ಕಳು ಶಿಕ್ಷಣ ಪಡೆಯುವ ಸಲುವಾಗಿ ಕಾರ್ಮಿಕ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಸಹಭಾಗಿತ್ವ ವಹಿಸಿ ಮಕ್ಕಳನ್ನು ಟೆಂಟ್ ಶಾಲೆ ಅಥವಾ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ದಾಖಲಿಸಲು ಅವರು ಸೂಚಿಸಿದರು.ಬಾಲಕಾರ್ಮಿಕ/ ಕಿಶೋರಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986 ರಡಿ ಬಾಲಕಾರ್ಮಿಕತೆ ನಿರ್ಮೂಲನೆ ಕುರಿತಂತೆ ಜಿಲ್ಲಾವಾರು ಹಾಗೂ ತಾಲೂಕುವಾರು ಅರಿವು ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲು ಅಗತ್ಯ ಕ್ರಮ ಬೇಕು ಎಂದು ತಿಳಿಸಿದರು.
2024-25 ನೇ ಸಾಲಿನಲ್ಲಿ ಒಟ್ಟು 832 ತಪಾಸಣೆಗಳು, 40 ಬಾಲಕಾರ್ಮಿಕರು ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಬಾಲ ಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ದ 6 ಎಫ್.ಐ.ಆರ್ ಆಗಿದ್ದು, 16 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದರು.ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಯ ಅಧಿಕಾರಿಗಳು ಇದ್ದರು.
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯಮೈಸೂರು: ಸೆಸ್ಕ್ 66/11 ಕೆ.ವಿ. ಸೌತ್ (ದಕ್ಷಿಣ) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಡಿ.12ರ ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯಾರಣ್ಯಪುರಂ 25 ರಿಂದ 30ನೇ ಕ್ರಾಸ್, ಕನಕಗಿರಿ, ವೀವರ್ಸ್ ಕಾಲೋನಿ, ಸ್ಟರ್ಲೀಂಗ್ ಸುತ್ತಮುತ್ತ, ಇಂಡಸ್ಟ್ರೀಯಲ್ ಸಬರ್ಬ್ 1, 2, 3ನೇ ಹಂತ, ಚಾಮುಂಡಿಪುರಂ ವೃತ್ತ, ಸಿಲ್ಕ್ ಫ್ಯಾಕ್ಟರಿ ಸುತ್ತಮುತ್ತ, ಆಶೋಕಪುರಂ, ಕೃಷ್ಣಮೂರ್ತಿಪುರಂ, ಮೇದರಕೇರಿ, ಆರ್.ಟಿ.ಓ ಸುತ್ತಮುತ್ತ, ಬಲ್ಲಾಳ್ ವೃತ್ತ, ನಂಜುಮಳಿಗೆ ಸುತ್ತಮುತ್ತ, ಬಂಡಿಪಾಳ್ಯ ಗ್ರಾಮ, ಹೊಸಹುಂಡಿ ಗ್ರಾಮ, ಗುಡುಮಾದನಹಳ್ಳಿ, ಉತ್ತನಹಳ್ಳಿ, ಏಳಿಗೆಹುಂಡಿ, ಆಲನಹಳ್ಳಿ ರಿಂಗ್ ರಸ್ತೆ ಸುತ್ತಮುತ್ತ, ನಾಚನಹಳ್ಳಿಪಾಳ್ಯ, ಕವಿತಾ ಬೇಕರಿ ಸರ್ಕಲ್, ಜೆ.ಪಿ. ನಗರ ಎ,ಬಿ,ಸಿ,ಡಿ ಅಂಡ್ ಇ ಬ್ಲಾಕ್, ಗೊಬ್ಬಳಿಮರ, ಪೊಲೀಸ್ ಬೂತ್ ವೃತ್ತ, ಓಂಕಾರ್ ಬಡಾವಣೆ, ಸಿದ್ದಲಿಂಗೇಶ್ವರ ಬಡಾವಣೆ, ಅಮೋಘ ಬಡಾವಣೆ, ಪ್ಯಾಲೆಸ್ ಹತ್ತಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.