ಹುಬ್ಬಳ್ಳಿ:

ನಗರದಲ್ಲಿ ನಿರ್ಮಿಸುತ್ತಿರುವ ಫ್ಲೈ ಓವರ್ ಕಾಮಗಾರಿಯ ಗುಣಮಟ್ಟ ಪರೀಕ್ಷಿಸಲು ಖುದ್ದಾಗಿ ವೀಕ್ಷಣೆ ನಡೆಸುವಂತೆ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗ ಉತ್ತರದ ಮುಖ್ಯ ಎಂಜಿನಿಯರ್‌ ಬಿ.ವೈ. ಭಂಡಿವಡ್ಡರ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಂಡಿಯನ್ ರೋಡ್ ಸೇಫ್ಟಿ ಸ್ಟ್ಯಾಂಡರ್ಡ್ಸ್ ಪ್ರಕಾರ ನಿರ್ಮಾಣ ಹಂತದ ಮತ್ತು ನಂತರದ ಸುರಕ್ಷತೆ ಮತ್ತು ಅತ್ಯುತ್ತಮ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಸ್ಥಳಕ್ಕೆ ಭೇಟಿ ನೀಡಿ ಕೈಗೊಂಡು ಸುರಕ್ಷತೆ ಮತ್ತು ಉತ್ತಮ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು. ಕಾಮಗಾರಿಯಲ್ಲಿ ಲೋಪದೋಷ ಇದ್ದಲ್ಲಿ ಅವುಗಳನ್ನು ತಕ್ಷಣ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಇಂಡಿಯನ್ ಕಾಂಕ್ರಿಟ್‌ ಇನ್​ಸ್ಟಿಟ್ಯೂಟ್ ಮತ್ತು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ತಂಡ ಫ್ಲೈ ಓವರ್ ಕಾಮಗಾರಿ ವೀಕ್ಷಿಸಿ, ತಾಂತ್ರಿಕ ದೋಷ ಹಾಗೂ ಸುರಕ್ಷತೆಯ ಗಂಭೀರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದನ್ನು ಸಚಿವ ಪ್ರಹ್ಲಾದ ಜೋಶಿ ಸ್ಮರಿಸಿದ್ದಾರೆ. ಕೂಡಲೇ ತಾಂತ್ರಿಕ ಪರಿಣಿತರ ತಂಡವನ್ನು ರಚಿಸಿ ಸ್ಥಳದ ವೀಕ್ಷಣೆ ಕೈಗೊಂಡು ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಸೂಕ್ತ ವರದಿ ಪಡೆದುಕೊಳ್ಳಬೇಕು. ಅಸುರಕ್ಷಿತ ಅಂಶ ಮತ್ತು ಕಾಮಗಾರಿ ಸ್ಥಳಗಳು ಕಂಡುಬಂದಲ್ಲಿ ಇಂಡಿಯನ್ ರೋಡ್ ಸೇಫ್ಟಿ ಸ್ಟ್ಯಾಂಡರ್ಡ್ಸ್ ಪ್ರಕಾರ ಕಾಮಗಾರಿಯ ಅನುಷ್ಠಾನವನ್ನು ಖಾತರಿಪಡಿಸಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ಈ ಯೋಜನೆಗೆ ಕೇಂದ್ರ ಸರ್ಕಾರವು ವಿಶೇಷ ಪ್ರಕರಣವೆಂದು ಅನುದಾನ ನೀಡಿದ್ದು, ಇದರ ಸಂಪೂರ್ಣ ಸದುಪಯೋಗ ಹಾಗೂ ಸಮರ್ಪಕ ಜಾರಿಯ ಹೊಣೆ ಲೋಕೋಪಯೋಗಿ ಇಲಾಖೆಯದ್ದು ಎಂಬುದನ್ನು ಪುನಃ ನೆನಪಿಸುತ್ತಿರುವುದಾಗಿ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.