ಇಚ್ಛಾಶಕ್ತಿಯ ಕೊರತೆಯಿಂದ ಶಿಕ್ಷಣದಿಂದ ವಂಚಿತ

| Published : Jun 04 2025, 02:05 AM IST

ಇಚ್ಛಾಶಕ್ತಿಯ ಕೊರತೆಯಿಂದ ಶಿಕ್ಷಣದಿಂದ ವಂಚಿತ
Share this Article
  • FB
  • TW
  • Linkdin
  • Email

ಸಾರಾಂಶ

ಹಾಡಿ ಜನರ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದ್ದು, 8ನೇ ತರಗತಿ ಓದುತ್ತಿರುವ ಮಕ್ಕಳಿಗೆ ಮಗ್ಗಿ ಅಕ್ಷರಗಳೇ ಬರುತ್ತಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಬುಡಕಟ್ಟು ಸಮುದಾಯಗಳ ಜನರ ಇಚ್ಛಾಶಕ್ತಿಯ ಕೊರತೆಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹೇಳಿದರು.

ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಬುಡಕಟ್ಟು ಶಿಕ್ಷಣ ಸಮಸ್ಯೆಗಳು ಮತ್ತು ಸವಾಲುಗಳು ಕುರಿತ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು, ಬುಡಕಟ್ಟು ಮಕ್ಕಳ ಶಿಕ್ಷಣದಲ್ಲಿ ಮಾಧ್ಯಮದ ಪಾತ್ರ ಕುರಿತು ಮಾತನಾಡಿದರು.

ಹಾಡಿ ಜನರ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದ್ದು, 8ನೇ ತರಗತಿ ಓದುತ್ತಿರುವ ಮಕ್ಕಳಿಗೆ ಮಗ್ಗಿ ಅಕ್ಷರಗಳೇ ಬರುತ್ತಿಲ್ಲ. ಶಿಕ್ಷಕರೇ ಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಈ ವ್ಯವಸ್ಥೆಯ ಬದಲಾವಣೆಗೆ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಇಂದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ. ಬುಡಕಟ್ಟು ಸಮುದಾಯದ ಜನರು ಮಾಧ್ಯಮಗಳ ಜೊತೆ ಒಡನಾಡವಿಟ್ಟುಕೊಂಡು ನಿಮ್ಮದೇ ತಂಡ ಮಾಡಿಕೊಂಡು, ನಿಮ್ಮದೇ ಯೂಟ್ಯೂಬ್ ಚಾನಲ್ ಮಾಡಿಕೊಂಡು ಸಮಸ್ಯೆಗಳನ್ನು ಪ್ರತಿದಿನ ಸರ್ಕಾರದ ಗಮನಕ್ಕೆ ತರಬೇಕು. ಮೊಬೈಲ್‌ ನಲ್ಲೇ ಸೆರೆ ಹಿಡಿದು ನಮಗೂ ಕಳುಹಿಸಿ. ನಿಮ್ಮ ಧ್ವನಿ ಏರಿಸಿ ಪ್ರಶ್ನೆ ಮಾಡಿದರೆ ಮಾಧ್ಯಮಗಳು ನಿಮ್ಮ ಹತ್ತಿರ ಬರುತ್ತವೆ. ಏನಾಗಬೇಕು, ಏನಾಗಿಲ್ಲ ಎಂಬುದನ್ನು ತಿಳಿಸಿ, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಅವರು ಹೇಳಿದರು.

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ಮಾತನಾಡಿ, ಈ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 150 ಜನ ಆಗಮಿಸಿದ್ದರು. 22 ಜನ ಸಂಶೋಧನಾ ವಿದ್ವಾಂಸರಿಂದ ಸಂಶೋಧನಾ ಲೇಖನಗಳು ಮಂಡನೆಯಾದವು. 6 ಪ್ರಧಾನಗೋಷ್ಠಿಗಳಲ್ಲಿ ವಿಚಾರ ಮಂಡನೆ ಮಾಡಲಾಯಿತು. 53 ಆಶ್ರಮ ಶಾಲೆಗಳ ಶಿಕ್ಷಕರು, 54 ಜನ ವಿವಿಧ ವಿವಿಗಳ ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. 30 ಜನ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು. ಮುಖ್ಯ ಭಾಷಣಕಾರರು ಮತ್ತು ಲೇಖನಗಳನ್ನು ಮಂಡನೆ ಮಾಡಿದವರ ಅಭಿಪ್ರಾಯ ಸಲಹೆಗಳನ್ನು ಸಂಗ್ರಹಿಸಿ ಪ್ರಕಟಿಸಲಾಗುವುದು ಎಂದ ತಿಳಿಸಿದರು.

ಸಂಸ್ಥೆಯ ಸಂಶೋಧನಾಧಿಕಾರಿ ಕೆ. ಶ್ರೀನಿವಾಸ್, ಪ್ರೊ.ಜಿ. ವೆಂಕಟೇಶ್‌ ಕುಮಾರ್, ಡಾ. ದೀಪಾ ಭಟ್, ಡಾ.ಸಿ. ಮಾದೇಗೌಡ, ಡಾ. ಕಲಾವತಿ, ರತ್ನಮ್ಮ, ಪ್ರೊ.ಎಚ್.ಪಿ. ಜ್ಯೋತಿ, ಡಾ. ಕುಶಾಲ ಬರಗೂರು, ಡಾ. ಮೋಹನ್‌ ಕುಮಾರ್, ಲೆಕ್ಕಪರಿಶೋಧನಾಧಿಕಾರಿ ಬಿ.ಆರ್. ಭವ್ಯಾ, ಡಾ. ಮಂಜುನಾಥ್, ರವಿಕುಮಾರ್, ಗುಣಧರ್, ಹೇಮಚಂದ್ರ ಇದ್ದರು.