ಮುಳಗುಂದ: ಪತ್ರಿಕಾರಂಗ ಹಾಗೂ ವೈದ್ಯ ವೃತ್ತಿ ಸಮಾಜದ ಎರಡು ಕಣ್ಣುಗಳು ಇದ್ದಂತೆ. ವೈದ್ಯರು ಆರೋಗ್ಯ ಶುದ್ಧೀಕರಿಸಿದರೆ, ಪತ್ರಕರ್ತರು ಸಮಾಜವನ್ನು ಶುದ್ಧೀಕರಿಸುತ್ತಾರೆ ಎಂದು ಪತ್ರಕರ್ತ ಆನಂದಯ್ಯ ವಿರಕ್ತಮಠ ಹೇಳಿದರು.
ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿ ಶುಕ್ರವಾರ ಶ್ರೀ ಬಾ.ಲಿ.ಮ.ಶಿ ಶಿಕ್ಷಣ ಸಮಿತಿ ಹಾಗೂ ಮುಳಗುಂದ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಅಪಾರ. ವೈದ್ಯರು ವೈಯಕ್ತಿಕ ಜೀವನಕ್ಕಿಂತ ರೋಗಿಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅಲ್ಲದೇ ಹಗಲು ರಾತ್ರಿ ಎನ್ನದೇ ತುರ್ತು ಸಂದರ್ಭಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿ, ಪತ್ರಿಕಾರಂಗ ಪ್ರಾಚೀನ ಕಾಲದಿಂದಲೂ ಇದೆ. ಹಿಂದೆ ರಾಜ ಮಹಾರಾಜರು ಬೇರೆ ಬೇರೆ ರಾಜ್ಯಗಳಿಗೆ ಸಂದೇಶ ರವಾನಿಸಲು ಓಲೆಗಳನ್ನು ಸಾರಥಿಗಳ ಮೂಲಕ ಹಾಗೂ ಪಕ್ಷಿಗಳ ಸಹಾಯದಿಂದ ಕಳಿಸುತ್ತಿದ್ದರು. ಇಂದು ಪತ್ರಿಕಾರಂಗ ತಂತ್ರಜ್ಞಾನ ಅಳವಡಿಸಿಕೊಂಡು ಸಾಕಷ್ಟು ಬದಲಾವಣೆ ಕಂಡಿದೆ ಎಂದರು.ಡಾ. ಎಸ್.ಸಿ. ಚವಡಿ ಮಾತನಾಡಿ, ಪತ್ರಿಕೆಗಳು ವಸ್ತುನಿಷ್ಠ, ನಿಖರ ಮಾಹಿತಿ ನೀಡುವ ಮೂಲಕ ಸಮಾಜದ ಕಣ್ಣು ತೆರೆಸುವುದಲ್ಲದೇ, ಜನತೆಯ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಪತ್ರಕರ್ತರು ವಸ್ತುನಿಷ್ಠ ವರದಿ ಮಾಡಬೇಕು. ವೈದ್ಯರನ್ನು ಸಮಾಜ ದೇವರ ಸಮಾನರನ್ನಾಗಿ ಕಾಣುತ್ತದೆ. ಆದ್ದರಿಂದ ವೈದ್ಯರು ವೃತ್ತಿಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಈ ವೇಳೆ ಪ್ರತಕರ್ತರು ಹಾಗೂ ವೈದ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ರಾಮಣ್ಣ ಕಮಾಜಿ, ಸಿಪಿಐ ಬಿ.ಜಿ. ಸುಬ್ಬಾಪೂರಮಠ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಅರುಣಕುಮಾರ ಹಿರೇಮಠ, ವಿ.ಡಿ. ಕಣವಿ ಮಹೇಶ ಛಬ್ಬಿ, ಪ್ರಾ. ಎ.ಎಂ. ಅಂಗಡಿ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಮುತ್ತು ಕುರಬಗೌಳಿ ನಿರೂಪಿಸಿದರು. ಪತ್ರಕರ್ತ ಚಂದ್ರು ಭಜಂತ್ರಿ ವಂದಿಸಿದರು.