ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪತ್ರಕರ್ತರಾದವರಿಗೆ ಸಾಮಾಜಿಕ ಬದ್ಧತೆ ಹಾಗೂ ಜವಾಬ್ದಾರಿ ಇರಬೇಕು. ಅಂದಾಗ ಮಾತ್ರ ಪತ್ರಿಕೋದ್ಯಮಕ್ಕೆ ಬೆಲೆ ಸಿಗಲಿದೆ ಎಂದು ಪತ್ರಕರ್ತ ಶ್ರೀಶೈಲ ಬಿರಾದಾರ ಹೇಳಿದರು.ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಭಾನುವಾರ ನಡೆದ 2ನೇ ದಿನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಸಮೂಹ ಮಾಧ್ಯಮ: ಸಮಸ್ಯೆ-ಪರಿಹಾರ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಎಲ್ಲ ಪತ್ರಕರ್ತರೂ ಕೆಟ್ಟವಾಗಿರುವುದಿಲ್ಲ, ಎಲ್ಲೋ ಒಬ್ಬರು ತಪ್ಪು ಮಾಡಿದಾಗ ಇಡೀ ಪತ್ರಕರ್ತ ಸಮೂಹ ತಪ್ಪು ಮಾಡಿದಂತೆ ಅಲ್ಲ. ಪತ್ರಕರ್ತರಾದವರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದಾಗ ಸಮಾಜ ಸುಧಾರಣೆ ಹಾಗೂ ಎಲ್ಲಿ ಅನ್ಯಾಯವಾಗಿರುತ್ತದೆ ಅಲ್ಲಿ ಸರಿಪಡಿಸಲು ಲೇಖನಿಯಿಂದ ಸಾಧ್ಯವಿದೆ ಎಂದರು. ಪತ್ರಕರ್ತ ಕಿರಣ್ ಬಾಳಾಗೋಳ ಮಾತನಾಡಿ, ಹಿಂದೆ ಪತ್ರಿಕೆ ವ್ಯವಸಾಯ ಇತ್ತು. ಈಗ ಪತ್ರಿಕೋದ್ಯಮವಾಗಿ ಮಾರ್ಪಟ್ಟಿದೆ. ಮಾಧ್ಯಮ ಮನಃಪರಿವರ್ತನೆ ಮಾಡಲಿದೆ. ಮಾಧ್ಯಮ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿದೆ. ಪತ್ರಿಕೋಧ್ಯಮ ಈಗ ಕಲುಷಿತವಾಗಿದೆ. ಅಲ್ಲಲ್ಲಿ ಬ್ಲ್ಯಾಕ್ ಮೇಲ್ ಪತ್ರಕರ್ತರು ಹುಟ್ಟಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದರು.
ಉಪನ್ಯಾಸದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಸಿ.ಎಂ.ಜೋಶಿ ಮಾತನಾಡಿ, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಕೆಲವರು ಪತ್ರಕರ್ತರಾಗುವ ಜಾಯಮನ ಶುರುವಾಗಿದೆ. ನಿಜವಾದ ಪತ್ರಕರ್ತರಿಗೆ ಪತ್ರಕರ್ತ ಎಂದು ಹೇಳಿಕೊಳ್ಳಲು ಕೀಳರಿಮೆ ಆಗಿದೆ. ಸಮಾಜ ಸುಧಾರಣೆ ಮಾಡುವುದು, ಲೋಪ ದೋಷಗಳನ್ನು ತಿದ್ದುವುದು, ಸಾಮಾಜಿಕ ಬಾಹಿರ ಕೆಲಸ ತಡೆಯಬೇಕು. ದುಡ್ಡಿಗಾಗಿ ಎಲ್ಲಿಯೂ ನಿಲ್ಲಬಾರದು. ಜ್ಞಾನ ಸಂಪತ್ತು ಇದ್ದವರು ಪತ್ರಕರ್ತರಾಗಬೇಕು ಎಂದು ಸಲಹೆ ನೀಡಿದರು. ಸಮ್ಮೇನಾಧ್ಯಕ್ಷ ಸಾಹಿತಿ ಡಾ.ತಾತಾಸಾಹೇಬ ಬಾಂಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲ್ಲೂಕಾಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಪ್ರಕಾಶ ಗುಳೇದಗುಡ್ಡ ವೇದಿಕೆಯಲ್ಲಿದ್ದರು.