ಕನ್ನಡಪ್ರಭ ವಾರ್ತೆ ಮೈಸೂರುಮಗು ಹುಟ್ಟಿದಾಗ ಮೊದಲು ಕೈಯಲ್ಲಿ ಎತ್ತಿಕೊಳ್ಳುವವರೂ ಶುಶ್ರೂಷಕರು. ಅದೇ ರೀತಿ ವಯೋವೃದ್ಧರ ಸೇವೆ ಮಾಡುವವರೂ ಕೂಡಾ ಅವರೇ ಆದ್ದರಿಂದ ಇವರ ಸೇವೆಯನ್ನು ಗೌರವಿಸುವ ಅಗತ್ಯವಿದೆ ಎಂದು ಪ್ರಾದೇಶಿಕ ಆಯುಕ್ತ ನಿತೇಶ್‌ ಪಾಟೀಲ್‌ ಅಭಿಪ್ರಾಯಪಟ್ಟರು.ನಗರದ ಜೆಎಸ್‌ಎಸ್‌ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಜೆಎಸ್‌ಎಸ್‌ ಮಹಾವಿದ್ಯಾಪೀಠ, ಜೆಎಸ್‌ಎಸ್‌ ಆಸ್ಪತ್ರೆ, ಜೆಎಸ್‌ಎಸ್‌ ಕಾಲೇಜ್ ಆಫ್ ನರ್ಸಿಂಗ್, ಜೆಎಸ್ಎಸ್ ಸ್ಕೂಲ್ ಆಫ್ ನರ್ಸಿಂಗ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಶುಶ್ರೂಷಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲಾ ಕಾಲಘಟ್ಟದಲ್ಲಿಯೂ ಕೂಡ ಶುಶ್ರೂಷಕರು ಆರೋಗ್ಯ ಕ್ಷೇತ್ರದ ಬೆನ್ನೆಲುಬಾಗಿ ಇರುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಜ್ವರ ಬಂದರೆ ಬಂಧುಗಳೇ ದೂರ ಇರುತ್ತಿದ್ದ ದಿನಗಳಲ್ಲಿ ಶುಶ್ರೂಷಕರು ಅವರ ಆರೈಕೆ ಮಾಡಿದ್ದಾರೆ. ಪ್ರಾಮಾಣಿಕ ಸೇವೆ ಸಲ್ಲಿಸುವ ಶುಶ್ರೂಷಕರು ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.ಶುಶ್ರೂಷಕರಿಲ್ಲದ ಆರೋಗ್ಯ ಕ್ಷೇತ್ರ ಅಸಾಧ್ಯ. ಸಂಕಷ್ಟದಲ್ಲಿರುವ ರೋಗಿಗಳನ್ನು ಆರೈಕೆ ಮಾಡುವ ಕಾರ್ಯ ಮಹತ್ವದ್ದಾಗಿದೆ. ಅವರು ವೈದ್ಯರು ಹಾಗೂ ರೋಗಿಗಳ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಆ ಮೂಲಕ ಜೀವ ಭಯದಲ್ಲಿ ಕಾಲ ಕಳೆಯುವವರಿಗೆ ಒಂದು ರೀತಿ ಬದುಕುವ ವಿಶ್ವಾಸ ತಂದುಕೊಡುತ್ತಾರೆ. ರೋಗಿಗೆ ವೈದ್ಯರು ನೀಡುವ ಚಿಕಿತ್ಸೆ ಎಷ್ಟು ಮುಖ್ಯವೋ, ಚಿಕಿತ್ಸೆ ನಂತರದ ಆರೈಕೆಯೂ ಅಷ್ಟೆ ಮುಖ್ಯ ಎಂದರು.ನರ್ಸ್‌ಗಳ ಸೇವೆ ತಾಯಿ ಆರೈಕೆಯಂತಿರುತ್ತದೆ. ವೈದ್ಯಕೀಯ ಸೇವೆಯಲ್ಲಿ ನರ್ಸಿಂಗ್ ಕ್ಷೇತ್ರದಲ್ಲಿ ಪ್ರಗತಿ ಕಾಣುವ ಮೂಲಕ ಎಲ್ಲರೂ ಆರೋಗ್ಯ ಸೇವೆಯಲ್ಲಿ ತೊಡಗುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.ಪ್ರಸ್ತುತ ದಿನಮಾನದಲ್ಲಿ ನರ್ಸಿಂಗ್‌ ಓದಿದವರಿಗೆ ಕೇವಲ ಆಸ್ಪತ್ರೆಗಳಲ್ಲಿ ಶುಶ್ರೂಷೆ ಮಾಡುವ ಕೆಲಸವೊಂದೇ ಇಲ್ಲ. ಅನೇಕ ದಾರಿಗಳು ಇವೆ. ನರ್ಸಿಂಗ್ ವೃತ್ತಿಯು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಹೊಂದಿರುವ ಉದ್ಯೋಗಗಳಲ್ಲಿ ಒಂದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ವಯಸ್ಸಾದವರ ಆರೈಕೆ ಮತ್ತು ಆರೋಗ್ಯ ರಕ್ಷಣಾ ಮೂಲಸೌಕರ್ಯಗಳ ವಿಸ್ತರಣೆಯಿಂದಾಗಿ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದರು.ಮುಖ್ಯ ಅತಿಥಿಯಾಗಿದ್ದ ಡಾ. ಮೃತ್ಯುಂಜಯಪ್ಪ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ಸುಧಾ ಮೃತ್ಯುಂಜಯಪ್ಪ ಮಾತನಾಡಿ, ಫ್ಲಾರೆನ್ಸ್ ನೈಟಿಂಗೇಲ್ ಅವರು ಮಾಡಿದ ಸೇವೆ ವಿಶ್ವಕ್ಕೆ ಮಾದರಿಯಾಗಿದೆ. ನರ್ಸಿಂಗ್ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಶುಶ್ರೂಷಕರು ಅವರನ್ನು ಮಾದರಿಯಾಗಿಸಿಕೊಳ್ಳಬೇಕು ಎಂದರು.ಈ ವೇಳೆ ಉತ್ತಮ ಸೇವೆ ಸಲ್ಲಿಸಿದ ಶುಶ್ರೂಷಕರನ್ನು ಸನ್ಮಾನಿಸಲಾಯಿತು. ನಶಾ ಮುಕ್ತ ಭಾರತ ಮ್ಯಾರಾಥಾನ್‌ ನಲ್ಲಿ ಭಾಗವಹಿಸಿ ಬಹುಮಾನ ಪಡೆದವರನ್ನು ಗೌರವಿಸಲಾಯಿತು.ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್‌ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ. ಮಧು, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಜೆಎಸ್‌ಎಸ್‌ ಆಸ್ಪತ್ರೆ ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಜಾನೆಟ್ ಮಥಿಯಾಸ್, ಸಹಾ ಪ್ರಾಧ್ಯಾಪಕಿ ಡಾ. ಪುರೋಹಿತ್‌ ಸರಸ್ವತಿ ಇದ್ದರು.