ಸಾರಾಂಶ
ಕಾಡಾನೆಗಳ ದಾಳಿಯಿಂದ ಮುಸುಕಿನ ಜೋಳ, ತೆಂಗಿನ ಮರ, ಕೃಷಿ ಪರಿಕರಗಳು ನಾಶವಾದ ಘಟನೆ ತಾಲೂಕಿನ ಚಿಕ್ಕ ಹುಣಸೆಪಾಳ್ಯದ ರೈತ ಬಸವರಾಜು ಜಮೀನಿನಲ್ಲಿ ನಡೆದಿದೆ.
ಹನೂರು: ಕಾಡಾನೆಗಳ ದಾಳಿಯಿಂದ ಮುಸುಕಿನ ಜೋಳ, ತೆಂಗಿನ ಮರ, ಕೃಷಿ ಪರಿಕರಗಳು ನಾಶವಾದ ಘಟನೆ ತಾಲೂಕಿನ ಚಿಕ್ಕ ಹುಣಸೆಪಾಳ್ಯದ ರೈತ ಬಸವರಾಜು ಜಮೀನಿನಲ್ಲಿ ನಡೆದಿದೆ.ರೈತ ಬಸವರಾಜು ಜಮೀನಿನಲ್ಲಿ ಮುಸುಕಿನ ಜೋಳವನ್ನು ಕಾಡಾನೆಗಳು ದಾಳಿ ಮಾಡಿ ಬೆಳೆಯನ್ನು ಸಂಪೂರ್ಣವಾಗಿ ತುಳಿದು, ತೆಂಗಿನ ಗಿಡಗಳನ್ನು ನಾಶಗೊಳಿಸಿವೆ. ಇದರಿಂದ ಲಕ್ಷಾಂತರ ರು. ಮೌಲ್ಯದ ಬೆಳೆ ಹಾನಿಯಾಗಿದೆ. ಚಿಕ್ಕಹುಣಸೆಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಲ್ಲಿ ಕಾಡಾನೆಗಳು ರಾತ್ರಿ ವೇಳೆ ದಿನನಿತ್ಯ ನಿರಂತರವಾಗಿ ದಾಳಿ ಮಾಡಿ ಫಸಲು ಮತ್ತು ಬೆಲೆ ಬಾಳುವ ಗಿಡ, ಮರ, ಕೃಷಿ ಚಟುವಟಿಕೆಯ ಪರಿಕರಗಳನ್ನು ನಾಶಗೊಳಿಸುತ್ತಿವೆ. ಅರಣ್ಯ ಅಧಿಕಾರಿಗಳು ಕಾಡಾನೆಗಳು ರೈತರ ಜಮೀನಿಗೆ ಬರುವುದನ್ನು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಂಡಿಮಾಳ ಗ್ರಾಮಕ್ಕೆ ತೆರಳುವ ಬಿ.ಆರ್.ಟಿ ವಲಯ ಅರಣ್ಯ ಪ್ರದೇಶದ ರಸ್ತೆಯಲ್ಲಿ ದಿನನಿತ್ಯ ಕಾಡಾನೆಗಳು ಬರುತ್ತಿರುವುದರಿಂದ ರಸ್ತೆಯನ್ನು ಬಂದ್ ಮಾಡಲು ಜಿಲ್ಲಾಡಳಿತದ ಅಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ರೈತ ಸಂಘ ಒತ್ತಾಯಿಸಿದೆ.