ಕನ್ನಡಪ್ರಭ ವಾರ್ತೆ ನಂಜನಗೂಡು

ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರ ಜವಾಬ್ದಾರಿ ಹೆಚ್ಚಿನದಾಗಿದೆ, ಎಲ್ಲರೂ ನಮ್ಮ ಕಸ ನಮ್ಮ ಜವಾಬ್ದಾರಿ ಎಂಬುದನ್ನು ಅರಿತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಸ್ವಚ್ಛ ನಂಜನಗೂಡು ಪುರಸ್ಕಾರಕ್ಕೆ ಸಹಕಾರ ನೀಡಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಮನವಿ ಮಾಡಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಓಡೋಣ ನಂಜನಗೂಡಿಗಾಗಿ ಒಂದಾಗೋಣ ಸ್ವಚ್ಛತೆಗಾಗಿ ಎಂಬ ಘೋಷ ವಾಕ್ಯದಡಿಯಲ್ಲಿ ನಂಜನಗೂಡು ನಗರಸಭೆ ವತಿಯಿಂದ ಏರ್ಪಡಿಸಲಾಗಿದ್ದ ಮ್ಯಾರಾಥಾನ್ ಗೆ ಚಾಲನೆ ನೀಡಿ ಮಾತನಾಡಿದರು.

ನಂಜನಗೂಡು ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದ್ದು, ಸ್ವಚ್ಛ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ. ಆದ್ದರಿಂದ ನಮ್ಮ ಕಸ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಅರಿತು, ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಿಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಸವನ್ನು ಬಿಸಾಡದೆ, ಸ್ವಚ್ಛವಾಗಿಟ್ಟುಕೊಂಡು ನಂಜನಗೂಡು ನಗರಸಭೆಗೆ ಸ್ವಚ್ಛ ನಗರಿ ಎಂಬ ಪುರಸ್ಕಾರ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ನಗರಸಭಾ ಆಯುಕ್ತ ಎಂ. ಬಸವರಾಜು ಮಾತನಾಡಿ, ನಂಜನಗೂಡಿನ ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನಗರಸಭೆಯ ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು, ಸ್ವಚ್ಛತೆಯ ಹಿತದೃಷ್ಟಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಕಸ ನೀಡದೆ ಬಯಲಲ್ಲಿ ಕಸ ಎಸೆದಲ್ಲಿ ಪ್ರಕರಣ ದಾಖಲಿಸುವ ಜೊತೆಗೆ ಕಸ ನೀಡದ ಮನೆಗಳಿಗೆ ಮುಂದಿನ ದಿನಗಳಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಿದರು.


ಮ್ಯಾರಥಾನ್ ನಲ್ಲಿ ಮೈಸೂರಿನ ಮಣಿಕಂಠ ಪ್ರಥಮ, ಸುಮಂತ್ ದ್ವಿತೀಯ, ಮಿಥುನ್ ತೃತೀಯ ಸ್ಥಾನ ಪಡೆದರು. ಮ್ಯಾರಥನ್ ನಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ, ತೃತೀಯ ಬಹುಮಾನ 2 ಸಾವಿರ ನಗದು ಬಹುಮಾನ ವಿತರಿಸಲಾಯಿತು.

ಈ ವೇಳೆ ನಗರಸಭಾ ಮಾಜಿ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಸದಸ್ಯರಾದ ಗಾಯಿತ್ರಿ, ರವಿ, ಮುಖಂಡರಾದ ಎನ್.ಎಂ. ಮಂಜುನಾಥ್, ಕಮಲೇಶ್, ಸತೀಶ್ ಗೌಡ, ಡಿವೈಎಸ್ಪಿ ಧರ್ಮೇಂದ್ರ, ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವೀಂದ್ರ, ನಗರಸಭೆ ಪರಿಸರ ವಿಭಾಗದ ಇಇ ಮೈತ್ರಾವತಿ, ಆರೋಗ್ಯ ನಿರೀಕ್ಷಕ ಆದರ್ಶ್, ವಸಂತ್, ಎಇ ಸಮಂತ್, ಸೇರಿದಂತೆ ನಗರಸಭೆಯ ಸಿಬ್ಬಂದಿ ಇದ್ದರು.