ಸಾರಾಂಶ
ಉಡುಪಿ ವಕೀಲರ ಸಂಘಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಮಗೆ ತಿಳಿಯದಿರುವ ವಿಷಯದ ಕುರಿತಾಗಿ ಇನ್ನೊಬ್ಬರನ್ನು ಕೇಳುವುದು ತಪ್ಪಲ್ಲ. ತಪ್ಪು ಮಾಡುವ ಬದಲು ಹಿರಿಯರನ್ನು ಕೇಳಿ ಸರಿಯಾದುದನ್ನು ಮಾಡುವುದೇ ಉತ್ತಮ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಸಲಹೆ ನೀಡಿದರು.ಅವರು ಶನಿವಾರ ಉಡುಪಿ ವಕೀಲರ ಸಂಘಕ್ಕೆ ಭೇಟಿ ನೀಡಿ, ವಕೀಲರನ್ನು ಉದ್ದೇಶಿಸಿ ಮಾತನಾಡಿದರು.ಯಾವುದೇ ಕ್ಷೇತ್ರದಲ್ಲಿಯೂ ಯಾರಿಗೂ ಪರಿಪೂರ್ಣ ಪಕ್ವತೆ ಇರುವುದಿಲ್ಲ. ಅನುಭವವೇ ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲಿಯೂ ಮನುಷ್ಯನನ್ನು ಮುನ್ನಡೆಸುತ್ತದೆ. ನಮಗಿರುವ ಕಾನೂನಿನ ಜ್ಞಾನ ಸಮುದ್ರದ ಮೇಲಿನ ಒಂದು ಹನಿಯಂತೆ. ಆದ್ದರಿಂದ ನ್ಯಾಯಪೀಠ ಮತ್ತು ವಕೀಲರು ಸಂವಿಧಾನದ ತತ್ವ ಆದರ್ಶಗಳಂತೆ ನಡೆಯಬೇಕು ಎಂದವರು ನುಡಿದರು.ಈ ಸಂದರ್ಭದಲ್ಲಿ ಉಡುಪಿ ವಕೀಲರ ಸಂಘದಿಂದ ಅವರನ್ನು ಸನ್ಮಾನಿಸಲಾಯಿತು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಪೋಕ್ಸೊ ನ್ಯಾಯಾಲಯ ಶ್ರೀನಿವಾಸ್ ಸುವರ್ಣ, ಪ್ರಧಾನ ನ್ಯಾಯಾಧೀಶ ಎ. ಸಮೀವುಲ್ಲಾ ಉಪಸ್ಥಿತರಿದ್ದರು.ನ್ಯಾಯವಾದಿ ರೂಪಶ್ರೀ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ ನ್ಯಾಯಮೂರ್ತಿಯವರ ಕಿರು ಪರಿಚಯ ಮಾಡಿದರು. ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ಲೋಕಾಯುಕ್ತ ವಿಶೇಷ ಅಭಿಯೋಜಕ ಟಿ.ವಿಜಯ್ ಕುಮಾರ್ ಶೆಟ್ಟಿ ನಿರೂಪಿಸಿದರು.