ಸಾರಾಂಶ
ನಾವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದಂತೆ ಎಲ್ಲೆಡೆ ಜಾರಿ ಮಾಡುತ್ತೇವೆ ಎಂಬ ವಿಶ್ವಾಸ ಕಾಂಗ್ರೆಸ್ ಪಕ್ಷದ ಮೇಲಿದೆ.
ಹುಬ್ಬಳ್ಳಿ:
ಬಿಜೆಪಿಯವರು ಯಾವುದೇ ಅಭಿವೃದ್ಧಿ, ಜನಪರ ಕೆಲಸ ಮಾಡದೇ ಒಬ್ಬರಿಗೊಬ್ಬರ ಮೇಲೆ ಎತ್ತಿ ಕಟ್ಟಿ ನೂರಾರು ಸುಳ್ಳು ಹೇಳುತ್ತಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.ಅವರು ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.
ನಾವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದಂತೆ ಎಲ್ಲೆಡೆ ಜಾರಿ ಮಾಡುತ್ತೇವೆ ಎಂಬ ವಿಶ್ವಾಸ ಕಾಂಗ್ರೆಸ್ ಪಕ್ಷದ ಮೇಲಿದೆ. ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿ ಯೋಜನೆಗಳನ್ನುಈಗಾಗಲೇ ಘೋಷಿಸಿದ್ದು ಅದರಲ್ಲಿ ರೈತರ ಸಂಪೂರ್ಣ ಸಾಲಮನ್ನಾ, ಪ್ರತಿ ವಿದ್ಯಾವಂತ ಯುವಕರಿಗೆ ₹ 1 ಲಕ್ಷ ಶಿಷ್ಯವೇತನ ಪ್ರೋತ್ಸಾಹಧನ, ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬದ ಮಹಿಳೆಗೆ ವರ್ಷಕ್ಕೆ ₹ 1 ಲಕ್ಷ. ಹೀಗೇ ಹಲವಾರು ಗ್ಯಾರಂಟಿ ಯೋಜನೆಗಳನ್ನು ದೇಶದಲ್ಲಿಯೂ ಕೂಡ ಜಾರಿ ಮಾಡುತ್ತೇವೆ ಎಂದರು.ಶಾಸಕ ಎನ್.ಎಚ್. ಕೋನರಡ್ಡಿ ಅವರು ಅಭಿವೃದ್ಧಿ ವಿಷಯದಲ್ಲಿ ಬುದ್ಧಿವಂತರಾಗಿದ್ದು ಸರ್ಕಾರದಿಂದ ಎಲ್ಲ ರೀತಿಯ ವಿವಿಧ ಇಲಾಖೆಯ ಅನುದಾನ ತರುವ ಕಲೆಯಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಉತ್ತಮ ಶಾಸಕನನ್ನು ಆಯ್ಕೆ ಮಾಡಿದ್ದೀರಿ ಎಂದರು.
ಈ ವೇಳೆ ಮುಖಂಡರಾದ ಸದಾನಂದ ಡಂಗನವರ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಂದಿನಿ ಹಾದಿಮನಿ, ಮುಖಂಡರಾದ ವೀರನಗೌಡ ಮರಿಗೌಡ್ರ, ಫಕ್ಕೂ ಯಡ್ರಾವಿ, ಬಸನಗೌಡ ತಿರ್ಲಾಪೂರ ಸೇರಿದಂತೆ ಹಲವರಿದ್ದರು.