ಸಕ್ಕರೆ ಜಿಲ್ಲೆ ಎಂಬ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ನಮ್ಮ ಕಾರ್ಖಾನೆ ಆವರಣದಲ್ಲಿ ಕಬ್ಬಿನಿಂದಲೇ ಗಣೇಶ ಮೂರ್ತಿ ತಯಾರಿಸಿರುವುದು ನನಗೂ ಬಹಳ ಸಂತೋಷವನ್ನುಂಟು ಮಾಡಿದೆ. ಗಣೇಶ ಮೂರ್ತಿ ನೋಡಲು ಭಕ್ತರು, ಸಾರ್ವಜನಿಕರು ಬರುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಗೌರಿ- ಗಣೇಶ ಹಬ್ಬದ ಅಂಗವಾಗಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ವತಿಯಿಂದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಾಂಗಣದಲ್ಲಿ ಒಂದು ಟನ್ ಕಬ್ಬು ಬಳಸಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯು ಭಕ್ತರು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.ದೇವಾಲಯ ಸ್ಥಾಪನೆ ಆರಂಭದಿಂದಲೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು. ರೈತರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಕಾರ್ಖಾನೆಯಿಂದ ಕಬ್ಬಿನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಪರಿಸರ ಸ್ನೇಹಿಯಾಗಿರುವುದರಿಂದ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ಕಾರ್ಖಾನೆ ಆಡಳಿತ ಮಂಡಳಿ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗಿದೆ.
ಪ್ರಸ್ತುತ ಪಿಒಪಿ ಗಣೇಶ ಮೂರ್ತಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸುವಂತೆ ಸರ್ಕಾರ, ಜಿಲ್ಲಾಡಳಿತ ಹಲವೆಡೆ ಅರಿವು ಮೂಡಿಸುತ್ತಿದ್ದರೂ ಬಹುತೇಕ ಕಡೆ ಪಿಒಪಿ ಮಿಶ್ರಿತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಇದು ಪರಿಸರಕ್ಕೆ ಮಾರಕವಾಗಿಯೂ ಪರಿಣಮಿಸಿದೆ.ಇದರ ನಡುವೆ ಚಾಂಶುಗರ್ ಕಾರ್ಖಾನೆ ಆವರಣದಲ್ಲಿ ಅದರಲ್ಲೂ ಕಬ್ಬಿನ ಮೂಲಕವೇ ಪ್ರತಿಷ್ಠಾಪಿಸಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿ ನೋಡುಗರನ್ನು ಆಕರ್ಷಿಸುತ್ತಿದೆ. ಅಲ್ಲದೇ, ಈ ಗಣೇಶನನ್ನು ನೋಡಲು ಸಾರ್ವಜನಿಕರು, ಭಕ್ತರು, ರೈತರು ಆಗಮಿಸಿ ಆಶ್ಚರ್ಯವನ್ನು ಪಡುತ್ತಿದ್ದಾರೆ.
ಗಣೇಶಮೂರ್ತಿ 10 ಅಡಿ ಎತ್ತರ, 5ಅಗಲ ವಿದೆ. ಮುರುಗೇಶ್ ಎಂಬುವವರು ಪ್ರೇಂ ತಯಾರು ಮಾಡಿದ್ದರು. ಆ ಪ್ರೇಂಗೆ ಒಂದು ಟನ್ 50 ಕೆಜಿ ಕಬ್ಬು ಬಳಸಿ ಓಂಕಾರ ಮೂರ್ತಿ, ಮಂಜುನಾಥ್ ಅವರು ವಕ್ರ ತುಂಡನ ಮೂರ್ತಿ ಸಿದ್ಧಪಡಿಸಿದ್ದಾರೆ. ರೈತರು ಸೇರಿದಂತೆ ಹಲವು ಜನತೆ ಭೇಟಿ ನೀಡಿ ದರ್ಶನ ಪಡೆದು ಹೋಗುತ್ತಿದ್ದಾರೆ.ಕಾರ್ಖಾನೆ ಹಿರಿಯ ಉಪಾಧ್ಯಕ್ಷ ಮಣಿ ಮಾತನಾಡಿ, ಸಕ್ಕರೆ ಜಿಲ್ಲೆ ಎಂಬ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ನಮ್ಮ ಕಾರ್ಖಾನೆ ಆವರಣದಲ್ಲಿ ಕಬ್ಬಿನಿಂದಲೇ ಗಣೇಶ ಮೂರ್ತಿ ತಯಾರಿಸಿರುವುದು ನನಗೂ ಬಹಳ ಸಂತೋಷವನ್ನುಂಟು ಮಾಡಿದೆ. ಗಣೇಶ ಮೂರ್ತಿ ನೋಡಲು ಭಕ್ತರು, ಸಾರ್ವಜನಿಕರು ಬರುತ್ತಿದ್ದಾರೆ. ಕೊನೆ ದಿನ ಗಣೇಶಮೂರ್ತಿ ಬಳಕೆಗೆ ತೆಗೆದುಕೊಂಡಿರುವ ಕಬ್ಬನ್ನು ರೈತರು ಬಿತ್ತನೆ ಮಾಡಲು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಚಾಮುಂಡೇಶ್ವರಿ ದೇವಾಲಯ ಸ್ಥಾಪನೆ ಆರಂಭದಿಂದಲೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಕಾರ್ಖಾನೆಯು ಹಲವು ವರ್ಷಗಳಿಂದ ರೈತ ಸ್ನೇಹಿ ಆಲೋಚನೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ದೇಗುಲದ ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ತಿಳಿಸಿದ್ದಾರೆ.