ಕೆ.ಎಂ.ದೊಡ್ಡಿ ದೊಡ್ಡ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿದೆ. ಗ್ರಾಮದಲ್ಲಿ ಉತ್ತಮ ರಸ್ತೆಗಳು ಮತ್ತು ಚರಂಡಿಗಳು ಇಲ್ಲದೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಸ್ಥಳೀಯರು ಮತ್ತು ಅಕ್ಕಪಕ್ಕದ ಗ್ರಾಪಂ ಗ್ರಾಮಸ್ಥರು ಸಹಕಾರ ನೀಡಿದರೆ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಕೆ.ಎಂ.ದೊಡ್ಡಿ ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಿ ದೊಡ್ಡ ಪಟ್ಟಣವಾಗಿ ರೂಪಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಇಲ್ಲಿನ ಓಂ ಶಾಂತಿ ಮಾರ್ಗದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುಮಾರು 55 ಲಕ್ಷ ರು. ವೆಚ್ಚದಲ್ಲಿ ಭಾರತಿನಗರ ಗ್ರಾಮ ಪರಿಮಿತಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಮೆಳ್ಳಹಳ್ಳಿ, ಗುಡಿಗೆರೆ ಗ್ರಾಮಗಳ ಜೊತೆಗೂಡಿ ಕೆ.ಎಂ.ದೊಡ್ಡಿ ಅಭಿವೃದ್ಧಿಗಾಗಿ ಡಿಪಿಆರ್ ತಯಾರಿಸಿ ಯೋಜನೆ ಕೈಗೊಳ್ಳಲಾಗುವುದು ಎಂದರು.

ಕೆ.ಎಂ.ದೊಡ್ಡಿ ದೊಡ್ಡ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿದೆ. ಗ್ರಾಮದಲ್ಲಿ ಉತ್ತಮ ರಸ್ತೆಗಳು ಮತ್ತು ಚರಂಡಿಗಳು ಇಲ್ಲದೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಸ್ಥಳೀಯರು ಮತ್ತು ಅಕ್ಕಪಕ್ಕದ ಗ್ರಾಪಂ ಗ್ರಾಮಸ್ಥರು ಸಹಕಾರ ನೀಡಿದರೆ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಕಳೆದ 20 ವರ್ಷಗಳಿಂದ ಗ್ರಾಮವನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಅಭಿವೃದ್ಧಿ ಕುಂಠಿತಕೊಂಡಿದೆ. ಕಳೆದ ಬಾರಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 30 ಲಕ್ಷ ರು. ಅನುದಾನ ನೀಡಿದ್ದೆ. ಈ ಹಿಂದೆ ಅಭಿವೃದ್ಧಿಗಾಗಿ 25 ಲಕ್ಷ ರು. ತಂದಿದ್ದೆ. ಆದರೆ, ಅನುದಾನಕ್ಕೆ ಟೆಂಡರ್ ಹಂತದಲ್ಲಿ ಅಡ್ಡಿಪಡಿಸಿದರು. ಅಭಿವೃದ್ಧಿ ವಿಚಾರದಲ್ಲಿ ನಾನು ಯಾರಿಗೂ ಹೆದರುವುದಿಲ್ಲ ಎಂದು ವಿರೋಧಿಗಳಿಗೆ ಕುಟುಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್ ಮಾತನಾಡಿ, ಕಳೆದ ಎರಡೂವರೆ ವರ್ಷಗಳಲ್ಲಿ ಕೆ.ಎಂ.ಉದಯ್ ಅವರು ಮದ್ದೂರು ಕ್ಷೇತ್ರದ ಅಭಿವೃದ್ಧಿಗಾಗಿ ಎರಡು ಸಾವಿರ ಕೋಟಿಗೂ ಹೆಚ್ಚಿನ ಅನುದಾನ ತಂದು ಕಾಯಕ ಯೋಗಿಯಾಗಿ ಜನಮಾನಸದಲ್ಲಿ ಹೆಸರಿರುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಸಿ ಶಾಸಕರ ಕೈ ಬಲಪಡಿಸುವ ಕಾರ್ಯವನ್ನು ಒಕ್ಕೊರಲಿನಿಂದ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಮಾಜಿ ಸದಸ್ಯ ಕೆ.ಟಿ.ಶ್ರೀನಿವಾಸ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರತಿನಗರ 4ನೇ ಬ್ಲಾಕ್ ನಲ್ಲಿ ಶಾಸಕರಿಗೆ ಹೆಚ್ಚಿನ ಮತ ನೀಡಿದ್ದಾರೆ. ಕೆ.ಎಂ. ದೊಡ್ಡಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿರುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಗ್ರಾಪಂ ಮಾಜಿ ಸದಸ್ಯ ಕೆ.ವಿ.ಶ್ರೀನಿವಾಸ್‌, ವೆಂಕಟೆಗೌಡ, ಸ್ನೇಹ ವಿದ್ಯಾ ಸಂಸ್ಥೆ ಅಧ್ಯಕ್ಷ ದಾಸೆಗೌಡ, ಕೊತ್ತನಹಳ್ಳಿ ಮಹದೇವು, ಸಿದ್ದೇಗೌಡ, ಪುಟ್ಟರಾಮ, ನಿವೃತ್ತ ಪ್ರಾಧ್ಯಾಪಕ ಬಿ.ಎಸ್. ಬೋರೇಗೌಡ, ಪೂಜಾರಿ ಮಹೇಶ್, ಗೋವಿಂದ, ನವೀನ್, ವಸಂತಮ್ಮ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.