ರಾಸಾಯನಿಕ ಮುಕ್ತ ಕೃಷಿ ಆರಂಭಿಸಿ: ಡಾ. ಚಂದ್ರಕಲಾ

| Published : Mar 20 2024, 01:24 AM IST

ಸಾರಾಂಶ

ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕುರಿತು ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿಸಖಿ) 5 ದಿನಗಳ ತರಬೇತಿ

ಕನ್ನಡಪ್ರಭ ವಾರ್ತೆ ಮೈಸೂರು

ಇಂದು ನೈಸರ್ಗಿಕ ಹಾಗೂ ಸಾವಯವ ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ನಿಗದಿಪಡಿಸಲಾಗುತ್ತಿದೆ. ಹೀಗಾಗಿ, ರೈತ ಮಹಿಳೆಯರು ರಾಸಾಯನಿಕ ಮುಕ್ತ ಕೃಷಿ ಆರಂಭಿಸಿ, ಆರೋಗ್ಯಕರ ಪರಿಸರ, ಉತ್ಪನ್ನಗಳನ್ನು ಉತ್ಪಾದಿಸಿ ಆರೋಗ್ಯ ಮಟ್ಟವನ್ನು ಸುಧಾರಿಸಬೇಕು ಎಂದು ಕಾಡಾ ಜಂಟಿ ಕೃಷಿ ನಿರ್ದೇಶಕಿ ಡಾ. ಚಂದ್ರಕಲಾ ಕರೆ ನೀಡಿದರು.

ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕುರಿತು ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿಸಖಿ) 5 ದಿನಗಳ ತರಬೇತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕೃಷಿಸಖಿಯರಿಗಾಗಿ ನೈಸರ್ಗಿಕ ಕೃಷಿ ಬಗ್ಗೆ 5 ದಿನಗಳು ಆಯೋಜಿಸಿರುವುದು ಬಹಳ ಉಪಯುಕ್ತವಾಗಿದೆ. ಈ ತರಬೇತಿಯನ್ನು ಪಡೆದು ಕೃಷಿಸಖಿಯರು ಪ್ರಮುಖ ಇಲಾಖೆಗಳು ಹಾಗೂ ರೈತರಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಸಿ, ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ.ಸಿ. ರಾಮಚಂದ್ರ ಮಾತನಾಡಿ, ಕೃಷಿಸಖಿಯರು ರೈತ, ರೈತ ಮಹಿಳೆಯರಿಗೆ ವಿಷಯ ವಿನಿಮಯ ಮಾಡಿಕೊಡುವಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡಬೇಕಾಗುತ್ತದೆ. ತರಬೇತಿಯ ಮೂಲ ಉದ್ದೇಶ ಸ್ವಸಹಾಯ ಗುಂಪಿನ ಸದಸ್ಯ ಮಹಿಳಾ ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಕಾರ್ಯಕ್ರಮಗಳ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವುದಾಗಿದೆ ಎಂದು ಹೇಳಿದರು.

ಅಲ್ಲದೆ, ಜೀವನೋಪಾಯ ವೃದ್ಧಿ ಮಾಡುವ ಜೊತೆಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆತ್ಮ ವಿಶ್ವಾಸ ಹೆಚ್ಚಿಸುವ ಹೊಸ ಯೋಜನೆಯಾಗಿದೆ. ಕೇವಲ ಕೃಷಿ ಮಾತ್ರವಲ್ಲದೆ ಮೌಲ್ಯವರ್ಧನೆ, ಕೃಷಿ ಮಾರುಕಟ್ಟೆ, ಕೃಷಿ ತಂತ್ರಜ್ಞಾನಗಳ ಬಗ್ಗೆ ತರಬೇತಿಯನ್ನು ಪಡೆದು ಉದ್ಯೋಗವಕಾಶ ಮತ್ತು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕೃಷಿಯಲ್ಲಿ ನವೀನ ತಂತ್ರಜ್ಞಾನಗಳಾದ ಹೊಸ ತಳಿಗಳು/ಹೈಬ್ರಿಡ್‌ ಗಳ ಬಳಕೆ, ಸಮತೋಲನ ಗೊಬ್ಬರಗಳ ಬಳಕೆ, ಸಮಗ್ರ ಕಳೆ ನಿರ್ವಹಣೆ, ಸಮಗ್ರ ರೋಗ ಮತ್ತು ಕೀಟಗಳ ನಿರ್ವಹಣೆ ಮಾಡುವುದರಿಂದ ಸಕಾಲದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು, ಈ ನಿಟ್ಟಿನಲ್ಲಿ ಕೃಷಿಸಖಿಯರು ರೈತರಿಗೆ ತಮ್ಮ ವೆಚ್ಚ, ಆದಾಯದ ಪರಿಮಿತಿಯನ್ನು ತಿಳಿಸಿಕೊಡುವಲ್ಲಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಎನ್. ಪುಷ್ಪಾ, ಡಾ.ಎ. ನಾಗಮಣಿ, ರಾಹುಲ್ ದಾಸ್, ಕ್ಷೇತ್ರ ಸಹಾಯಕರಾದ ಆಸಿಫ್ ಪಾಷಾ, ಧರಣೇಶ ಇದ್ದರು.