ಸಾರಾಂಶ
ಪದ್ಧತಿಯಂತೆ ಕದಿರನ್ನು ಶ್ರೀಕೃಷ್ಣನ ಗರ್ಭಗುಡಿಯ ಮೂಡಣದ್ವಾರದ ಮೂಲಕವೇ ಒಳತಂದು ಕೃಷ್ಣನ ಮುಂದಿಟ್ಟು, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಶ್ರಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಂಗಳಾರತಿ ಬೆಳಗಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ಕೃಷ್ಣಮಠದಲ್ಲಿ ಶನಿವಾರ ಕದಿರುಕಟ್ಟುವ ಹಬ್ಬವು ಸಂಪ್ರದಾಯಬದ್ಧವಾಗಿ ನೆರವೇರಿತು. ಮಠದ ಪುರೋಹಿತರು ಸಮೀಪದ ಗದ್ದೆಯಲ್ಲಿ ನೂತನವಾಗಿ ಬೆಳೆದ ಭತ್ತದ ಕದಿರಿಗೆ ಪೂಜೆ ಸಲ್ಲಿಸಿದರು. ಬಳಿಕ ಕದಿರು ಕೊಯ್ದು ರಥಬೀದಿಗೆ ತಂದು ಸ್ವರ್ಣ ಪಲ್ಲಕ್ಕಿಯಲ್ಲಿಟ್ಟು ವಾದ್ಯ, ಮಂತ್ರಘೋಷ ಸಹಿತ ಬಿರುದಾವಳಿಗಳೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ತರಲಾಯಿತು.ಪದ್ಧತಿಯಂತೆ ಕದಿರನ್ನು ಶ್ರೀಕೃಷ್ಣನ ಗರ್ಭಗುಡಿಯ ಮೂಡಣದ್ವಾರದ ಮೂಲಕವೇ ಒಳತಂದು ಕೃಷ್ಣನ ಮುಂದಿಟ್ಟು, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಶ್ರಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಂಗಳಾರತಿ ಬೆಳಗಿದರು.ವಿಶೇಷವೆಂದರೆ ಹೊಸ್ತಿಲು ಹುಣ್ಣಿಮೆಯ ದಿನ ಮತ್ತು ಕದಿರಾರೋಹಣದ ದಿನಗಳ ಎರಡು ದಿನಗಳಂದು ಮಾತ್ರ ಗರ್ಭಗುಡಿಯ ಮೂಡಣ ದ್ವಾರ ತೆರೆಯಲಾಗುತ್ತದೆ.ಅಲ್ಲಿಂದ ಕದಿರನ್ನು ಧಾನ್ಯ ಸಂಗ್ರಹಾಗಾರವಿರುವ ಬಡಗು ಮಾಳಿಗೆಗೆ ತಂದು ಆರತಿ ಬೆಳಗಲಾಯಿತು. ಉಡುಪಿಯ ಅಷ್ಟಮಠಗಳು, ಇತರೆ ಮಠಗಳು ಹಾಗೂ ಆಸುಪಾಸಿನ ನೂರಾರು ಮನೆಗಳ ಭಕ್ತರಿಗೆ ಭತ್ತದ ತೆನೆಗಳನ್ನು ಧಾನ್ಯಸಿರಿ ರೂಪದಲ್ಲಿ ಪ್ರಸಾದವಾಗಿ ವಿತರಿಸಲಾಯಿತು.ಪರ್ಯಾಯ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನಾಚಾರ್ಯ, ವಿದ್ವಾಂಸರಾದ ಮಧ್ವರಮಾನಾಚಾರ್ಯ, ಗೋಪಾಲಾಚಾರ್ಯ, ವೇದವ್ಯಾಸ ಪುರಾಣಿಕ, ಪುರೋಹಿತರಾದ ರಾಘವೇಂದ್ರ ಕೊಡಂಚ, ಕೊಟ್ಟಾರಿ ರಾಮ ಕೊಡಂಚ ಮೊದಲಾದವರಿದ್ದರು.