ಕನ್ನಡಪ್ರಭ ವಾರ್ತೆ, ಕೊಪ್ಪ ಕೊಪ್ಪ ಬಲಗಾರು ಸಮೀಪದ ಕಾಫಿತೋಟವೊಂದರಲ್ಲಿ ಬುಧವಾರ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕಾಡು ಕೋಣವೊಂದು ದಾಳಿ ನಡೆಸಿದ್ದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಬಲಗಾರಿನ ಮೀನಾಕ್ಷಿ (44) ಗಾಯಗೊಂಡ ಮಹಿಳೆ. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆಗೆಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದೊಯ್ದಿದ್ದು, ಮಹಿಳೆ ಆರೋಗ್ಯ ವಿಚಾರಿಸಿದ ಅಧಿಕಾರಿಗಳು ಚಿಕಿತ್ಸಾ ವೆಚ್ಚವನ್ನು ಇಲಾಖೆ ಭರಿಸುವ ಭರವಸೆ ನೀಡಿದ್ದಾರೆ. ಮಲೆನಾಡಿನಲ್ಲಿ ಕಾಫಿ ತೋಟಗಳು ಕಾಡಿನಂತೆ ಇರುವುದರಿಂದ ಕಾಡುಕೋಣ ಸೇರಿದಂತೆ ವನ್ಯಜೀವಿಗಳು ತಿರುಗಾಡುತ್ತಿರುತ್ತವೆ. ತೋಟದ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸುವಾಗ ಒಬ್ಬೊಬ್ಬರನ್ನೇ ಕಳುಹಿಸದೆ ಆದಷ್ಟು ತಂಡದೊಂದಿಗೆ ಕಳುಹಿಸಬೇಕು. ಇತ್ತೀಚೆಗೆ ಕೊರಡಿ ಹಿತ್ಲು ಸಮೀಪ ಯಾರೋ ಕಿಡಿ ಗೇಡಿಗಳು ಪ್ರಾಣಿಗಳಿಗೆ ಉರುಳು ಹಾಕಿದ್ದು ಅದರಲ್ಲಿ ಕಾಡುಕೋಣವೊಂದು ಸಿಕ್ಕಿಬಿದ್ದಿತ್ತು. ವನ್ಯಜೀವಿಗಳ ಬೇಟೆಗಾಗಿ ಉರುಳು ಹಾಕುವುದು ಅಪರಾಧ. ಪ್ರಾಣಿಗಳಿಂದ ಆದಷ್ಟು ಜಾಗ್ರತೆ ವಹಿಸಿ, ಇಂದು ಮಹಿಳೆ ಮೇಲೆ ನಡೆದ ಕಾಡುಕೋಣ ದಾಳಿ ತೀರಾ ಆಕಸ್ಮಿಕವಾಗಿದ್ದು ಕಾಡುಕೋಣ ಓಡುವ ಬರದಲ್ಲಿ ಮಹಿಳೆಗೆ ತಾಗಿ ಮಹಿಳೆ ಬಿದ್ದಿದ್ದಾರೆಯೇ ಹೊರತು ಇದು ಕಾಡುಕೋಣ ನಿರ್ದಿಷ್ಟ ಗುರಿಯೊಂದಿಗೆ ಮಾಡಿದ ದಾಳಿ ಯಲ್ಲ. ಆದ್ದರಿಂದ ಮಹಿಳೆ ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಕಾಡುಪ್ರಾಣಿಗಳು ಕಂಡುಬಂದಲ್ಲಿ ಅವುಗಳು ಗಾಬರಿಯಾಗುವಂತೆ ಗಲಭೆ ಮಾಡದೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಬೇಕು ಎಂದು ಆರ್ಎಫ್ ಒ ರಂಗನಾಥ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.