ಕನ್ನಡಪ್ರಭ ವಾರ್ತೆ ಕಡೂರು
ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ರಾಜಕೀಯ ಶಕ್ತಿ ತುಂಬುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ಕ್ಷೇತ್ರಗಳ ಪಾತ್ರ ಗಮನಾರ್ಹ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.ಯಗಟಿ ಗ್ರಾಮದಲ್ಲಿ ಮಾಜಿ ಶಾಸಕ ವೈ.ಎಸ್. ವಿ. ದತ್ತ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಜನತಾದಳದ ಭದ್ರ ಕೋಟೆಯಾಗಿದ್ದ ಕಡೂರು ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ನಂತರ ಅನೇಕ ರಾಜಕೀಯ ವಿಪ್ಲವಗಳ ನಡುವೆಯೂ ಪಕ್ಷ ಅಸ್ತಿತ್ವ ಉಳಿಸಿಕೊಂಡಿದೆ. ಕಳೆದ 40 ವರ್ಷಗಳಲ್ಲಿ ಕೇವಲ 2 ಬಾರಿ ಮಾತ್ರ ಬೇರೆ ಪಕ್ಷ ಗೆಲುವು ದಾಖಲಿಸಿದೆ. ನಮ್ಮ ಪಕ್ಷ ಸತತ 8 ಭಾರಿ ಗೆಲುವು ದಾಖಲಿಸುವಲ್ಲಿ ದಿ. ಕೆ.ಎಂ. ಕೃಷ್ಣಮೂರ್ತಿ ಮತ್ತು ವೈ.ಎಸ್.ವಿ. ದತ್ತ ಅವರ ಕೊಡುಗೆ ಅನನ್ಯ ಎಂದರು.
ಪ್ರಸ್ತುತ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಇದ್ದರೂ ಜಿಲ್ಲೆಯ ಮೂಡಿಗೆರೆ- ಕಡೂರು ಕ್ಷೇತ್ರ ಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಬರುವ ವಿಧಾನಸಭಾ ಚುನಾವಣೆಗಳಲ್ಲಿ ಕಣಕ್ಕಿಳಿಸುವ ಕುರಿತು ದೇವೇಗೌಡರು ಮತ್ತು ಕುಮಾರಸ್ವಾಮಿ ನಿರ್ಧರಿಸಲಿದ್ದಾರೆ ಎಂದರು.ತಮಗೆ ದತ್ತ ಅವರ ಬಗ್ಗೆ ಅಪಾರ ಗೌರವ ಮತ್ತು ವಿಶ್ವಾಸವಿದೆ. ದೇವೇಗೌಡರ ನಡುವಿನ ಸಂಭಂದ4 ದಶಕಕ್ಕೂ ಮೀರಿದ್ದು, ಈ ಕಾರಣಕ್ಕೆ ಕಡೂರು ಕ್ಷೇತ್ರದ ಜೆಡಿಎಸ್ ರಾಜಕಾರಣಕ್ಕೆ ಸಂಭಂಧಿಸಿದಂತೆ ದತ್ತ ನಿರ್ಧಾರವೇ ಅಂತಿಮ. ಈ ವಿಚಾರದಲ್ಲಿ ನಾನು ಸದಾ ಅವರೊಟ್ಟಿಗೆ ಇರುತ್ತೇನೆ ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್, ಸಿ.ಎಚ್.ಪ್ರೇಮ್ ಕುಮಾರ್, ಕೆ.ಎಂ. ಮಹೇಶ್ವರಪ್ಪ, ಬಿ.ಟಿ. ಗಂಗಾಧರ ನಾಯ್ಕ, ಚೇತನ್ ಕೆಂಪರಾಜ್, ಮೋಹನ್ ಕುಮಾರ್, ಗಣೇಶ್, ಬಿಳುವಾಲ ಪ್ರಕಾಶ್ ಮತ್ತಿತರರು ಇದ್ದರು.
25ಕೆಕೆಡಿಯು1. ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ನಡೆದ ಮಾಜಿ ಶಾಸಕ ವೈ.ಎಸ್.ವಿ. ದತ್ತರವರ ಹುಟ್ಟು ಹಬ್ಬದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಮ ಮತ್ತಿತರರು ಇದ್ದರು.