ಉಳ್ಳಾಲ: ಉಳ್ಳಾಲ ತಾಲೂಕು ಕೈರಂಗಳದ ನಿವಾಸಿಯಾಗಿದ್ದ 57 ವರ್ಷದ ಬಾಲಕೃಷ್ಣ ಭಟ್ ಅವರು ಇತ್ತೀಚೆಗೆ, ಇಂಟ್ರಾಕ್ರೇನಿಯಲ್ ಬ್ಲೀಡ್‌ನಿಂದ ಮೃತಪಟ್ಟ ಬಳಿಕ, ಅವರ ಕುಟುಂಬ ಮಾನವೀಯತೆ ಮತ್ತು ಸಮಾಜಸೇವೆಯ ಅಪೂರ್ವ ಉದಾಹರಣೆಯಾಗಿ ದೇಹದ ಅಂಗಾಂಶ ದಾನಕ್ಕೆ ಒಪ್ಪಿಗೆ ನೀಡಿದೆ.

ಜೀವಿತಾವಧಿಯಲ್ಲೇ ಮರಣಾನಂತರ ದೇಹದಾನ ಮಾಡುವ ಇಚ್ಛೆಯನ್ನು ಬಾಲಕೃಷ್ಣ ಭಟ್ ವ್ಯಕ್ತಪಡಿಸಿದ್ದರು. ಅವರ ಈ ಮಹತ್ಕಾರ್ಯವನ್ನು ಗೌರವಿಸಿದ ಕುಟುಂಬಸ್ಥರು ಟಿಷ್ಯೂ ಮತ್ತು ಗ್ರಾಫ್ಟ್ ದಾನಕ್ಕೆ ಸಮ್ಮತಿ ಸೂಚಿಸಿದ್ದು, ಇದರಿಂದ ಅನೇಕ ರೋಗಿಗಳಿಗೆ ನೆರವಾಗುವ ಜೊತೆಗೆ ವೈದ್ಯಕೀಯ ಶಿಕ್ಷಣ ಹಾಗೂ ಚಿಕಿತ್ಸೆಗೆ ಮಹತ್ವದ ಕೊಡುಗೆ ದೊರಕಿದೆ.ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಟ್ರಾನ್ಸ್‌ಪ್ಲಾಂಟ್ ಸಂಯೋಜಕಿ ಪದ್ಮಾವತಿ ಹಾಗೂ ಅಕ್ಷತಾ ಶೆಟ್ಟಿ ಅವರ ತುರ್ತು ಕರೆ ಮೇರೆಗೆ, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಡಾ. ಶಾಂತರಾಮ ಶೆಟ್ಟಿ ಟಿಷ್ಯೂ ಬ್ಯಾಂಕ್‌ನ ತಜ್ಞರ ತಂಡ ತಕ್ಷಣ ಅಂಗಾಗ ಸಂಗ್ರಹ ಕಾರ್ಯಾಚರಣೆಗೆ ಮುಂದಾಯಿತು.ಡಾ. ವರುಣ್ ಶೆಟ್ಟಿ ನೇತೃತ್ವದ ತಂಡದಲ್ಲಿ ಡಾ. ನಿರ್ಮಲ್ ಬಾಬು, ಡಾ. ವಿನಯ್ ಕುಮಾರ್, ಡಾ. ಅನೂಪ್ ಹೆಗ್ಡೆ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ. ಸಂದೇಶ್ ಭಾಗವಹಿಸಿದ್ದರು. ತಂಡವು ಮೃತದೇಹದಿಂದ ಎರಡೂ ಉಲ್ನಾ, ಎರಡೂ ಹ್ಯೂಮರಸ್, ಎರಡೂ ಫೀಮರ್, ಎರಡೂ ಟಿಬಿಯಾ ಎಲುಬುಗಳು ಹಾಗೂ ಚರ್ಮದ ಗ್ರಾಫ್ಟ್‌ಗಳನ್ನು ಯಶಸ್ವಿಯಾಗಿ ಸಂಗ್ರಹಿಸಿತು.ದೇಹದ ಗೌರವ ಕಾಪಾಡುವ ಉದ್ದೇಶದಿಂದ ಮತ್ತು ಯಾವುದೇ ವಿಕೃತತೆ ಉಂಟಾಗದಂತೆ ವಿಶೇಷ ಪ್ಲಾಸ್ಟಿಕ್ ಎಲುಬುಗಳನ್ನು ಮರುಸ್ಥಾಪಿಸಲಾಯಿತು.ಈ ಕಾರ್ಯಾಚರಣೆಗೆ ವೆನ್‌ಲಾಕ್ ಸರ್ಕಾರಿ ಆಸ್ಪತ್ರೆ ಹಾಗೂ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಆಡಳಿತ ಮಂಡಳಿ, ನರ್ಸಿಂಗ್ ಸಿಬ್ಬಂದಿ, ಸ್ನಾತಕೋತ್ತರ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ಟಿಷ್ಯೂ ಬ್ಯಾಂಕ್ ಸಿಬ್ಬಂದಿಯ ಸಂಪೂರ್ಣ ಸಹಕಾರ ದೊರಕಿತು.ಬಾಲಕೃಷ್ಣ ಭಟ್‌ ಬಾಣಸಿಗರಾಗಿ ಮುಡಿಪು ಪರಿಸರದಲ್ಲಿ ಪ್ರಸಿದ್ಧರು, ಅನಾರೋಗ್ಯಪೀಡಿತರಾಗಿದ್ದಾಗ ತಮ್ಮ ಮನೆಮಂದಿಯಲ್ಲಿ ಮರಣಾನಂತರ ಅಂಗಾಂಗ ದಾನದ ಇಚ್ಛೆ ವ್ಯಕ್ತಪಡಿಸಿದ್ದರು.