ಸಾರಾಂಶ
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ । ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮಕನ್ನಡಪ್ರಭವಾರ್ತೆ ಚಿತ್ರದುರ್ಗ
ಸಮಾಜದಲ್ಲಿನ ಮೂಡನಂಬಿಕೆ, ಕಂದಾಚಾರಗಳನ್ನು ತೊಡದು ಹಾಕುವಲ್ಲಿ ಕೈವಾರ ತಾತಯ್ಯನವರ ಶ್ರಮ ಅಪಾರವೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಮಾತನಾಡಿದರು.
ನಾಯಕನ ಹಟ್ಟಿಯಂತೆಯೇ ಕೈವಾರವು ಕೂಡ ಸುಪ್ರಸಿದ್ಧ ಮಹಿಮಾತ್ಮ ಯಾತ್ರ ಕ್ಷೇತ್ರವಾಗಿದೆ. ಮಾನವರಾಗಿ ಸಂಸಾರ, ಸಾಮಾಜಿಕ ಜಂಜಾಟಗಳನ್ನು ಅನುಭವಿಸಿದ ನಾರೇಯಣರು, ಆಧ್ಯಾತ್ಮಕ ಸಾಧನೆ ಮಾಡಿ, ಸಮಾಜಕ್ಕೆ ದಾರಿ ದೀಪವಾದರು. ಸಧೃಡ ಸಮಾಜ ಕಟ್ಟುವಲ್ಲಿ ಶ್ರಮಿಸಿದರು. ಅಪಾರ ಜ್ಞಾನಶಕ್ತಿಯಿಂದ ಕಾಲಜ್ಞಾನ ಗ್ರಂಥವನ್ನು ರಚಿಸಿದರು. ಈ ಮೂಲಕ ಮುಂದಿನ ದಿನಗಳಲ್ಲಿ ಸಮಾಜ ಎಚ್ಚರಿಕೆಯಿಂದ ಹೇಗೆ ಸಾಗಬೇಕು ಎಂಬುದನ್ನು ತಿಳಿಸಿದರು.ಯೋಗಿ ನಾರೇಯಣ ಯತೀಂದ್ರರು ಬೋಧಿಸಿದ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪರಸ್ಪರ ಪ್ರೀತಿ ಸಹಬಾಳ್ವೆಯಿಂದ ಬದುಕಬೇಕು ಎಂದು ಬಿ.ಟಿ.ಕುಮಾರಸ್ವಾಮಿ ಮನವಿ ಮಾಡಿದರು. ನಿವೃತ್ತ ಶಿಕ್ಷಕ ಹುರುಳಿ ಬಸವರಾಜ ಉಪನ್ಯಾಸ ನೀಡಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಾಡಗೀತೆ ಪ್ರಸ್ತುತ ಪಡಿಸಿ, ಕಾರ್ಯಕ್ರಮ ನಿರೂಪಿಸಿದರು. ಬಲಿಜ ಸಮಾಜದ ಮುಖಂಡರಾದ ಎಂ.ಜೆ ಸೂರ್ಯನಾರಾಯಣ, ನಂಜುಂಡಸ್ವಾಮಿ, ವೈ.ಹನುಮಂತಪ್ಪ, ಎಂ.ಗಂಗಣ್ಣ, ಸಿ.ಹೆಚ್.ಬಸವರಾಜ್, ಪ್ರಹ್ಲಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.