ಪ್ರಕೃತಿಯನ್ನು ಪೂಜಿಸುವ ಮತ್ತು ಆರಾಧಿಸುವ ಕೊಡವರಿಗೆ ಕಕ್ಕಡ ಪದಿನೆಟ್ಟ್ ಹಬ್ಬ ಮಹತ್ವದ್ದಾಗಿದೆ ಎಂದು ಇಲ್ಲಿನ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹೇಳಿದರು.
ಸೋಮವಾರಪೇಟೆ: ಪ್ರಕೃತಿಯನ್ನು ಪೂಜಿಸುವ ಮತ್ತು ಆರಾಧಿಸುವ ಕೊಡವರಿಗೆ ಕಕ್ಕಡ ಪದಿನೆಟ್ಟ್ ಹಬ್ಬ ಮಹತ್ವದ್ದಾಗಿದೆ ಎಂದು ಇಲ್ಲಿನ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹೇಳಿದರು.ಇಲ್ಲಿನ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಆಶ್ರಯದಲ್ಲಿ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಕ್ಕಡ ಪದಿನೆಟ್ಟ್ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿಶಿಷ್ಟ ಸಂಸ್ಕೃತಿ, ಉಡುಗೆ ತೊಡುಗೆ, ಪದ್ಧತಿ ಪರಂಪರೆ, ಹಬ್ಬದ ಆಚರಣೆಗಳನ್ನು ಸಂಪ್ರದಾಯದಂತೆ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವ ಕೊಡವ ಜನಾಂಗದ ಹಿರಿಯರು ತಮ್ಮ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸಿ ಕೊಡಬೇಕಾದ ಅಗತ್ಯತೆ ಇದೆ. ಪಾರಂಪರಿಕ ಖಾದ್ಯಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಾಚಿನಾಡಂಡ ಇಂದಿರಾ ಗೊಂಬೆ ಮಾತನಾಡಿ, ಕುಟುಂಬದ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಹಬ್ಬ ಹರಿದಿನಗಳ ಆಚರಣೆಯನ್ನು ತಮ್ಮ ಮಕ್ಕಳಿಗೆ ತಿಳಿಸಬೇಕು. ಪೊಮ್ಮಕ್ಕಡ ಕೂಟಕ್ಕೆ ಇನ್ನೂ ಹೆಚ್ಚಿನ ಮಹಿಳೆಯರು ಸದಸ್ಯರಾಗುವ ಮೂಲಕ ಕೂಟವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.ಸಮಾಜದ ಹಿರಿಯರಾದ ಬಾಚಿನಾಡಂಡ ಪೂಣಚ್ಚ, ಆಪಾಡಂಡ ವೀರರಾಜ್, ಹಂಚೆಟ್ಟೀರ ಶಾಂತಿ, ಸಮಾಜದ ಕಾರ್ಯದರ್ಶಿ ಅನಿಲ್, ಖಜಾಂಚಿ ಪಾಡೆಯಂಡ ಮುತ್ತಣ್ಣ, ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಪೋರೇರ ಅನಿತಾ, ಖಜಾಂಚಿ ಅಜ್ಜಮಕ್ಕಡ ವೀಣಾ ಕಾರ್ಯಪ್ಪ ಉಪಸ್ಥಿತರಿದ್ದರು. ಕೊಡವ ಪಾರಂಪರಿಕ ಖಾದ್ಯಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.