ನಾಡಿನಲ್ಲಿರುವ ಭಾಷೆ, ಕಲೆ ಮತ್ತು ಸಂಸ್ಕೃತಿ ಹೆಮ್ಮರವಾಗಿಸುತ್ತಿದೆ ಮತ್ತು ಅವಕಾಶ ವಂಚಿತ ಉದಯೋನ್ಮುಖ ಅಭ್ಯರ್ಥಿಗಳಿಗೆ ಕಲಾ ಪ್ರತಿಭೋತ್ಸವ ಕಾರ್ಯಕ್ರಮವು ಅವರ ಪ್ರತಿಭಾ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ

ಕೊಪ್ಪಳ: ಉತ್ತಮ ಪ್ರತಿಭೆ ಗುರುತಿಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಪರ್ಧಾರೂಪದಲ್ಲಿ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳದಿಂದ ನಡೆದ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ಮತ್ತು ಯುವಜನರ ಕಲಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ದೃಷ್ಟಿಕೋನದಿಂದ ಕಲಾ ಪ್ರತಿಭೋತ್ಸವ ಏರ್ಪಡಿಸಿದ್ದು ಹಾಗೂ ಇಲಾಖೆ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಈ ನಾಡಿನಲ್ಲಿರುವ ಭಾಷೆ, ಕಲೆ ಮತ್ತು ಸಂಸ್ಕೃತಿ ಹೆಮ್ಮರವಾಗಿಸುತ್ತಿದೆ ಮತ್ತು ಅವಕಾಶ ವಂಚಿತ ಉದಯೋನ್ಮುಖ ಅಭ್ಯರ್ಥಿಗಳಿಗೆ ಕಲಾ ಪ್ರತಿಭೋತ್ಸವ ಕಾರ್ಯಕ್ರಮವು ಅವರ ಪ್ರತಿಭಾ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜೀವನಸಾಬ್ ಬಿನ್ನಾಳ ಮಾತನಾಡಿ, ಈ ನಾಡಿನ ಕಲೆ ಮತ್ತು ಸಂಸ್ಕೃತಿ ಹಿರಿದಾಗಿದೆ, ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಇವುಗಳ ನಡುವೆ ನಮ್ಮ ಮೂಲ ಸಂಸ್ಕೃತಿ ಕಣ್ಮರೆಯಾಗುತ್ತಿದೆ ಎಂದರು.

ಈ ದಿಶೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಈ ನಾಡಿನ ಚಿಂತಕರು, ಸಾಹಿತಿಗಳು ಹಾಗೂ ಲೇಖಕರು ಎಲ್ಲರನ್ನು ಒಳಗೊಂಡು ಈ ನಾಡಿನ ಜನಪದ ಸಂಸ್ಕೃತಿ ಪ್ರೋತ್ಸಾಹಿಸುವ ದೃಷ್ಟಿಕೋನದಿಂದ ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ಮುನ್ನುಡಿ ಬರೆಯುತ್ತಿದ್ದಾರೆ ಎಂದರು.

ಕಲೆ ಮನುಷ್ಯನನ್ನು ಸದಾ ಜೀವಂತಿಕೆ ಚಟುವಟಿಕೆಗಳಿಂದ ಇರಿಸುತ್ತದೆ. ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಳ್ಳಲು ಕಲೆ ಸಾಹಿತ್ಯ ಸಂಗೀತ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸುಗಮ ಸಂಗೀತ, ಚಿತ್ರಕಲೆ, ಜನಪದ ಗೀತೆ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ ಇತರೆ ಹಲವಾರು ಕಲಾ ಪ್ರಕಾರದ ಅಭ್ಯರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ಶರಣಪ್ಪ ವಡಗೇರಿ, ದಾವಲಸಾಬ್‌ ಅತ್ತಾರ, ಸದಾಶಿವಗೌಡ ಪಾಟೀಲ, ಪರಶುರಾಮ ಬಣ್ಣದ, ಗಣೇಶ್ ರಾಯಬಾಗಿ ಮತ್ತು ಅರ್ಪಣಾ ಹೆಗಡೆ, ದೀಪಾ ದರೋಜಿ , ಶಂಕರ ಬಿನ್ನಾಳ್, ಪ್ರತಿಭಾ ಅಭ್ಯರ್ಥಿಗಳ ಪಾಲಕರು ಮತ್ತು ಇತರರು ಇದ್ದರು.