ಕಲಬರಗಿ: ಕುಂಭ ಹೊತ್ತು ಕನ್ನಡ ರಥಯಾತ್ರೆ ಸ್ವಾಗತಿಸಿದ ಡಿಸಿ

| Published : Jan 14 2024, 01:32 AM IST

ಸಾರಾಂಶ

ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆಗೆ ಸಂಘ-ಸಂಸ್ಥೆಗಳು, ಜಿಲ್ಲಾಡಳಿತದಿಂದ ಅದ್ಧೂರಿ ಸ್ವಾಗತ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮೈಸೂರು ರಾಜ್ಯ ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕರ್ನಾಟಕ ಅರಿವು ಮೂಡಿಸುವ ಭಾಗವಾಗಿ ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಶನಿವಾರ ಕಲಬುರಗಿ ನಗರಕ್ಕೆ ಪ್ರವೇಶಿಸುತ್ತಿದ್ದಂತೆ ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾಡಳಿತದಿಂದ ಕುಂಭ ಕಳಶದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತಲೆಯ ಮೇಲೆ ಕಳಸ ಹೊತ್ತು ಸ್ವಾಗತ ಕೋರಿದ್ದು ಗಮನ ಸೆಳೆಯಿತು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ರಥದಲ್ಲಿರುವ ನಾಡ ದೇವತೆ ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ, ಆರತಿ ಬೆಳಗಿ ಬರಮಾಡಿಕೊಂಡರು. ಮುತ್ತೈದೆಯರು ಪೂರ್ಣ ಕುಂಭದೊಂದಿಗೆ ರಥಯಾತ್ರೆಗೆ ಸ್ವಾಗತ ಕೋರಿದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟಿಲ ದೇವಿದಾಸ್, ತಹಸೀಲ್ದಾರ್‌ ನಾಗಮ್ಮ ಕಟ್ಟಿಮನಿ, ಶಿಷ್ಠಾಚಾರ ತಹಸೀಲ್ದಾರ ನಿಸಾರ್ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾಹಿತಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇದಕ್ಕೆ ಸಾಕ್ಷಿಯಾದರು.

ನಂತರ ನಡೆದ ರಥಯಾತ್ರೆಯ ಮೆರವಣಿಗೆಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 1973ರಲ್ಲಿ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ವಿಶಾಲಾರ್ಥದಲ್ಲಿ ಕರ್ನಾಟಕ ಮರುನಾಮಕರಣ ಮಾಡಿ 50 ವರ್ಷ ಗತಿಸಿದ ಕಾರಣಕ್ಕಾಗಿ ನಮ್ಮ ಸರ್ಕಾರ ಇಡೀ ವರ್ಷ ನಾಡು-ನುಡಿ ಕುರಿತು ಯುವ ಪೀಳಿಗೆಗೆ ಪರಿಚಯಿಸಲು ಈ ರಥ ಯಾತ್ರೆ ಹಮ್ಮಿಕೊಂಡಿದೆ. ಕನ್ನಡ ಕಟ್ಟುವ ಕೆಲಸಕ್ಕೆ ಇಂದಿಲ್ಲಿ ನೆರೆದ ಎಲ್ಲಾ ಕನ್ನಡ ಪ್ರೇಮಿಗಳಿಗೆ ಧನ್ಯವಾದ ತಿಳಿಸುವೆ ಎಂದರು.

ಕನ್ನಡ ಹಾಡಿಗೆ ನೃತ್ಯ:

ರಥಯಾತ್ರೆ ಮೆರವಣಿಗೆಯುದ್ದಕ್ಕೂ ಕನ್ನಡ ಹಾಡಿಗೆ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಶಾಲಾ ಮಕ್ಕಳು, ಸಾಹಿತಿಗಳು, ಸಾರ್ವಜನಿಕರು ವಿಶೇಷವಾಗಿ ಕೆಂಪು-ಹಳದಿ ಶಾಲು ಧರಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹೆಜ್ಜೆ ಹಾಕುತ್ತಾ, ಕುಣಿದು ಸಂಭ್ರಮಿಸಿದರು. ಕಳಸ ಹೊತ್ತ ಲಂಬಾಣಿ ಮಹಿಳೆಯರ ಸೊಗಸಾದ ನೃತ್ಯ ನೋಡಗರನ್ನು ಆಕರ್ಷಿಸಿತ್ತು.

ನಂತರ ಜ್ಯೋತಿ ರಥಯಾತ್ರೆಯು ನಗರದ ಅನ್ನಪೂರ್ಣ ಕ್ರಾಸ್, ಸಾರ್ವಜನಿಕ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ, ಖರ್ಗೆ ಪೆಟ್ರೋಲ್ ಬಂಕ್, ಟಿಪ್ಪು ಸುಲ್ತಾನ ಚೌಕ್, ಹಾಗರಗಾ ರಿಂಗ್ ರೋಡ್, ಹುಮನಾಬಾದ ರಿಂಗ್ ರೋಡ್, ಪೂಜಾರಿ ಚೌಕ್, ಕಾಕಡೆ ಚೌಕ್, ತಾಜ ಸುಲ್ತಾನಪೂರ ರಿಂಗ್ ರೋಡ್, ಸೈಯದ್ ಚಿಂಚೋಳಿ ಕ್ರಾಸ್, ಆಳಂದ ಚೆಕ್ ಪೋಸ್ಟ್, ಜಾಫರಾಬಾದ ಕ್ರಾಸ್, ಎಂ.ಎಸ್.ಕೆ. ಮಿಲ್ ರಿಂಗ್ ರೋಡ್, ಮಿರ್ಚಿ ಗೋದಾಮ, ಹೀರಾಪೂರ ರಿಂಗ್ ರೋಡ್, ಕೇಂದ್ರ ಬಸ್ ನಿಲ್ದಾಣ, ಜೇವರ್ಗಿ ಕ್ರಾಸ್, ಎಸ್.ವಿ.ಪಿ. ವೃತ್ತ ಮಾರ್ಗವಾಗಿ ಸಾಗಿ ಐವಾನ್-ಎ-ಶಾಹಿ ಅತಿಥಿ ಗೃಹಕ್ಕೆ ದಿನದ ಯಾತ್ರೆ ಸಂಪನ್ನಗೊಂಡಿತ್ತು. ರವಿವಾರ ಬೆಳಿಗ್ಗೆ ರಥವು ಕಲಬುರಗಿ ನಗರದ ನಾಗನಹಳ್ಳಿ ರಿಂಗ್ ರೋಡ್, ಶಹಾಬಾದ ರಿಂಗ್ ರೋಡ್, ಓಂ.ನಗರ ಗೇಟ್, ಗುಲ್ಬರ್ಗ ವಿಶ್ವವಿದ್ಯಾಲಯ, ಶ್ರೀನಿವಾಸ ಸರಡಗಿ, ಸಣ್ಣೂರ ಮಾರ್ಗವಾಗಿ ಜಿಲ್ಲೆಯ ಕಾಳಗಿ ತಾಲೂಕಿಗೆ ಪ್ರಯಾಣ ಬೆಳಸಲಿದೆ.

ನಗರದಲ್ಲಿನ ರಥ ಯಾತ್ರೆ ಮೆರವಣಿಗೆ ಸಂದರ್ಭದಲ್ಲಿ ಕನ್ನಡ ಮತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಡಿ ವಿವಿಧ ಕಲಾ ತಂಡಗಳು ಡೊಳ್ಳು ಕುಣಿತ, ಕಂಸಾಳೆ, ಲಂಬಾಣಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದವು. ನಾಟ್ಯಂಜಲಿ ತಂಡವು ಎಸ್.ವಿ.ಪಿ. ವೃತ್ತದಲ್ಲಿ ಭರತನಾಟ್ಯ ಪ್ರದರ್ಶಿಸಿದರು.