ಕಲಬುರಗಿ- ಬೆಂಗಳೂರು ನೂತನ ರೈಲು ಶುಭಾರಂಭ

| Published : Mar 05 2024, 01:31 AM IST

ಕಲಬುರಗಿ- ಬೆಂಗಳೂರು ನೂತನ ರೈಲು ಶುಭಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮಾ.9ರಂದು ಸಂಜೆ 5 ಗಂಟೆಗೆ ಕಲಬುರ್ಗಿಯಲ್ಲಿ ನೂತನ ರೈಲು ಸಂಚಾರದ ಉದ್ಘಾಟನೆಯಾಗಲಿದೆ ವಾರದಲ್ಲಿ 3 ದಿನ ಕಲಬುರಗಿ - ಬೈಯ್ಯಪ್ಪನಹಳ್ಳಿ ಮಧ್ಯೆ ನೂತನ ರೈಲು ತನ್ನ ಓಡಾಟ ನಡೆಸಲಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಿಂದ ಬೆಂಗಳೂರಿಗೆ ವಾರದಲ್ಲಿ 3 ದಿನಗಳ ಕಾಲ ಸಂಚರಿಸುವಂತೆ ಹೊಸ ರೈಲು ಓಡಿಸಲು ರೇಲ್ವೆ ಇಲಾಖೆ ಮುಂದಾಗಿದೆ. ಈ ಸೇವೆಗೆ ಮಾ.9ರಂದೇ ಹಸಿರು ನಿಶಾನೆ ಕೂಡ ದೊರೆಯಲಿದೆ. ವಾರದಲ್ಲಿ 3 ದಿನ ಕಲಬುರಗಿ - ಬೈಯ್ಯಪ್ಪನಹಳ್ಳಿ ಮಧ್ಯೆ ನೂತನ ರೈಲು ತನ್ನ ಓಡಾಟ ನಡೆಸಲಿದೆ.

ಮಾ.9ರಂದು ಸಂಜೆ 5 ಗಂಟೆಗೆ ಕಲಬುರ್ಗಿಯಲ್ಲಿ ನೂತನ ರೈಲು ಸಂಚಾರದ ಉದ್ಘಾಟನೆಯಾಗಲಿದೆ. ನೂತನ ಕಲಬುರಗಿ- ಬೆಂಗಳೂರು ರೈಲು ಗಾಡಿಯು ಕಲಬುರ್ಗಿಯಿಂದ ಸಂಜೆ 5 ಗಂಟೆಗೆ ಹೊರಟು ಮರುದಿನ ಮುಂಜಾನೆ ಮಾ.10ರಂದು 4.15ಕ್ಕೆ ಬೆಂಗಳೂರು ಸಮೀಪದ ಬೈಯ್ಯಪ್ಪನಹಳ್ಳಿ ಅತ್ಯಾಧುನಿಕ ಮತ್ತು ಸುಸಜ್ಜಿತವಾಗಿ ನಿರ್ಮಾಣಗೊಂದಿರುವ ಸರ್. ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ತಲುಪಲಿದೆ. ವಾರದಲ್ಲಿ 3 ದಿನ ಇದೇ ವೇಳಾಪಟ್ಟಿಯಲ್ಲಿ ಈ ರೈಲು ಕಲಬುರಗಿ ಹಾಗೂ ಬೆಂಗಳೂರು ಮಧ್ಯೆ ಓಡಾಟ ನಡೆಸಲಿದೆ.

ಈ ರೈಲುಗಾಡಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿಕೊಂಡು ರೈಲ್ವೆ ಇಲಾಖೆಯು ಏ.5ರಿಂದ ವಾರಕ್ಕೆ ಮೂರು ದಿನ ಸಂಚಾರ ನಡೆಸಲು ಒಪ್ಪಿಕೊಂಡಿದೆ.

ಕಲಬುರಗಿ ರೈಲು ಬಳಕೆದಾರರಿಗೆ ಸಂತಸ: ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯಾಬಲವನನ್ನು ಗಮನದಲ್ಲಿಟ್ಟುಕೊಂಡು ಕಲಬುರಗಿ ಹಾಗೂ ಬೆಂಗಳೂರು ನಡುವೆ ನಿತ್ಯ ಎಕ್ಸ್‌ಪ್ರೆಸ್‌ ರೈಲೊಂದನ್ನು ಓಡಿಸಬೇಕು ಎಂಬ ಈ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವ ರೇಲ್ವೆ ಇಲಾಖೆ ವಾರದಲ್ಲಿ 3 ದಿನ ಓಡುವ ಹೊಸ ರೈಲನ್ನು ನೀಡಿದ್ದರಿಂದ ಈ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ.

ಕಲ್ಬುರ್ಗಿ ವಿಭಾಗದ ಜನರು ಮಾ.9ರ ಹೊಸ ರೈಲಿನ ಈ ಶುಭಾರಂಭ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ಜಾಧವ್ ಕರೆ ನೀಡಿದ್ದಾರೆ. ಹೇಳಿಕೆ ನೀಡಿರುವ ಅವರು ಬೆಂಗಳೂರು - ಕಲ್ಬುರ್ಗಿ ನಡುವೆ ಪ್ರತ್ಯೇಕ ರೈಲು ಬೇಕೆಂಬ ದಶಕಗಳ ಬೇಡಿಕೆಯು ಕೊನೆಗೂ ಈಡೇರಿದಂತಾಗಿದೆ ಎಂದಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಇಂದು (ಮಾರ್ಚ್ 4ರಂದು) ರೈಲು ಭವನದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಮಾರ್ಚ್ 9ರಂದು ಶನಿವಾರ ಸಾಯಂಕಾಲ 5 ಗಂಟೆಗೆ ಕಲಬುರ್ಗಿ- ಬೆಂಗಳೂರು ನೂತನ ರೈಲು ಸಂಚಾರ ಶುಭಾರಂಭಗೊಳ್ಳಲಿದೆ ಎಂದು ಜಾಧವ್ ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ.

ನಿತ್ಯ ಸಂಚಾರ ನಡೆಸುವಂತೆ ಮನವಿ: ಈ ರೈಲುಗಾಡಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿಕೊಂಡು ರೈಲ್ವೆ ಇಲಾಖೆಯು ಏಪ್ರಿಲ್ 5ರಿಂದ ವಾರಕ್ಕೆ ಮೂರು ದಿನ ಸಂಚಾರ ನಡೆಸಲು ಒಪ್ಪಿಕೊಂಡಿದೆ. ಈ ಭಾಗದ ಪ್ರಯಾಣಿಕರು ಈ ರೈಲುಗಾಡಿಯಲ್ಲಿ ಸಂಚರಿಸಿ ನಿತ್ಯ ಸಂಚಾರ ನಡೆಸುವಂತಾಗಲು ಸಹಕರಿಸಬೇಕು ಎಂದು ಜಾಧವ್ ಮನವಿ ಮಾಡಿದ್ದಾರೆ.

ವಚನ ಪಾಲನೆ - ಅಭಿನಂದನೆ: ಸುಧೀರ್ಘ ಪ್ರಯತ್ನದ ಫಲವಾಗಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಜನತೆಯ ದಶಕಗಳ ಕನಸು ಸಾಕಾರಗೊಳ್ಳುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಒಂದೊಂದಾಗಿ ಈಡೇರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಕ್ಷೇತ್ರದ ಜನರಿಗೆ ಕೊಟ್ಟ ಮಾತು ಉಳಿಸಿ ವಿಶ್ವಾಸವನ್ನು ಗಳಿಸಿರುವುದಕ್ಕೆ ಸಂತಸವಾಗುತ್ತಿದೆ. ಈ ಭಾಗದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಮತ್ತು ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಜಾಧವ್ ಹೇಳಿದ್ದಾರೆ.