ಕಲಬುರಗಿ : ಬೆಳಗ್ಗೆ 5 ಗಂಟೆಗೆ ಎದ್ದು ಹಂದಿಗಳಿಗೆ ಮುಸುರೆ ಹಾಕಿ, ಸಮಾರಂಭಗಳಲ್ಲಿ ಮುಸುರೆ ತೊಳೆದು, ಮನೆ ಮನೆ ಸುತ್ತಿ ಪಾತ್ರೆ ತೊಳೆಯುತ್ತ, ಭಿಕ್ಷೆ ಬೇಡಿ ಅನಂತರ ಶಾಲೆಗೆ ತೆರಳಿ ಚೆನ್ನಾಗಿ ಕಲಿತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲನೇ ದರ್ಜೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪಾಸಾಗಿ ಎಲ್ಲರನ್ನು ಹುಬ್ಬೇರಿಸುಂತೆ ಮಾಡಿದ್ದಾಳೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿದ್ಯಾರ್ಥಿನಿ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಜಾತಾ ಭೀಮಾಶಂಕರ ಗೊಲ್ಲರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 529 ಅಂಕ (84.64%) ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿನಿ.

ಸುಜಾತಾ ಪೋಷಕರು ಅನಕ್ಷರಸ್ತರು, ಇವರ ಕುಟುಂಬಸ್ಥರು ಹಂದಿ ಸಾಕಾಣಿಕೆ, ಭಿಕ್ಷೆ ಬೇಡೋದು, ಮುಸುರೆ ಪಾತ್ರೆ ತೊಳೆದು ಜೀವನ ನಡೆಸುತ್ತಾರೆ. ಮಗಳ ಈ ಸಾಧನೆಗೆ ಅವರ ತಂದೆ ಭೀಮಾಶಂಕರ ಹಾಗೂ ತಾಯಿ ಸರುಬಾಯಿ ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ.


ಐಎಎಸ್‌ ಅಧಿಕಾರಿ ಆಗುವಾಸೆ:

ಬೆಳಗ್ಗೆ ಹಂದಿಗಳಿಗೆ ಮುಸುರಿ ಹಾಕುತಿದ್ದೆ, ಮನೆ ಮನೆಗೆ ರೊಟ್ಟಿ ಭಿಕ್ಷೆ ಬೇಡಿ ಬಳಿಕ ಶಾಲೆಗೆ ಹೋಗುತ್ತಿದ್ದೆ. ರಾತ್ರಿ ಚೆನ್ನಾಗಿ ಅಭ್ಯಾಸ ಮಾಡಿದ್ದೇನೆ. ಶಿಕ್ಷಕರು ಒಳ್ಳೆಯ ಪಾಠ ಮಾಡಿದ್ದರಿಂದ ಫಲಿತಾಂಶ ಚೆನ್ನಾಗಿ ಬಂದಿದೆ. ಮುಂದೆ ಐಎಎಸ್ ಆಗಬೇಕೆಂದಿದ್ದೇನೆ ಎಂದು ಸುಜಾತಾ ಆಸೆ ವ್ಯಕ್ತಪಡಿಸಿದ್ದಾಳೆ.