ಕನ್ನಡಪ್ರಭ ವಾರ್ತೆ ಮೈಸೂರು
ಜನರಿಗೆ ಹತ್ತಿರದಲ್ಲಿದ್ದುಕೊಂಡು ಅವರ ಬದುಕನ್ನು ಸುಧಾರಿಸುವ ಇಲಾಖೆ ಆರ್.ಡಿ.ಪಿ.ಆರ್ ಆಗಿದ್ದು, ಈ ಹಿನ್ನಲೆಯಲ್ಲಿ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.ನಗರದ ಕಲಾಮಂದಿರದಲ್ಲಿ ಜಿಪಂ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ವೃಂದ ಸಂಘಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಆರ್.ಡಿ.ಪಿ.ಆರ್ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನನ್ನ ಸೇವಾವಧಿಯಲ್ಲಿ ಜಿಪಂ ಸಿಇಒ ಆಗಿ ಕೆಲಸ ಮಾಡಿದ್ದು ನನಗೆ ನಿಜವಾಗಿಯೂ ಹೆಚ್ಚು ತೃಪ್ತಿ ತಂದಿದೆ. ಈಗಿನ ಸಿಇಒ ಅವರ ನೇತೃತ್ವದಲ್ಲಿ ಆರ್.ಡಿ.ಪಿ.ಆರ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿ ಉತ್ತಮ ಐಎಎಸ್ ಅಧಿಕಾರಿಯಾಗಿ ಯುಕೇಶ್ ಕುಮಾರ್ ಗುರಿತಿಸಿಕೊಂಡಿದ್ದಾರೆ ಎಂದರು.ಇಲಾಖೆಯ ನೌಕಕರಿಗೆ ಎರಡು ದಿನಗಳ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿಲಾಗಿದೆ. ಪೌರಾಣಿಕ ನಾಟಕ, ನೃತ್ಯ, ಜನಪದ ಗೀತೆ ಸೇರಿದಂತೆ ಅನೇಕ ಬಗೆಯ ಕಲಾ ಪ್ರದರ್ಶನ ಅತ್ಯುತ್ತಮವಾಗಿತ್ತು ಎಂದು ಅವರು ಶ್ಲಾಘಿಸಿದರು.
ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ನೌಕರರು ಉತ್ಸಾಹದಿಂದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಕಷ್ಟು ಶ್ರಮಪಟ್ಟು ನೌಕರರು ತಮ್ಮ ಕಲಾ ಪ್ರತಿಭೆಯನ್ನು ಉತ್ತಮವಾಗಿ ಅನಾವರಣ ಮಾಡಿದ್ದಾರೆ. ಇದೇ ರೀತಿಯಲ್ಲಿ ಕೆಲಸದ ನಡುವೆ ಸಮಯ ಸಿಕ್ಕಾಗ ಅಭ್ಯಾಸವನ್ನು ಮುಂದುವರೆಸಿ ಎಂದು ಸಲಹೆ ನೀಡಿದರು.
ಇಷ್ಟೇ ಉತ್ಸಾಹದಿಂದ ಎಲ್ಲಾ ನೌಕಕರು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ನಮ್ಮ ಕಾರ್ಯವ್ಯಾಪ್ತಿಯಲ್ಲಿ ನಮಗಿರುವ ಜವಬ್ದಾರಿಯನ್ನು ಉತ್ತಮವಾಗಿ ಪೂರೈಸಬೇಕು. ನಿಗಧಿತ ಸಮಯದಲ್ಲಿ ನಮಗೆ ವಹಿಸಿದ ಕೆಲಸವನ್ನು ಹೆಚ್ಚಿನ ಕಾರ್ಯಕ್ಷಮತೆಯಿಂದ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ಮಾಡೋಣ ಎಂದು ಅವರು ಕರೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿಗಳಾದ ಬಿ.ಎಂ. ಸವಿತಾ, ಭೀಮಪ್ಪ ಕೆ. ಲಾಳಿ, ಮುಖ್ಯ ಯೋಜನಾಧಿಕಾರಿ ಕೆ. ಪ್ರಭುಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಇಒಗಳಾದ ಎಸ್.ಪಿ. ಧರಣೇಶ್, ಸಿ. ಕೃಷ್ಣ, ಪ್ರೇಮ್ ಕುಮಾರ್, ವಿ.ಪಿ. ಕುಲದೀಪ್, ಎ.ಎನ್. ರವಿ, ಕೆ. ಹೊಂಗಯ್ಯ, ಸುನಿಲ್ ಕುಮಾರ್, ಕೆ. ರಂಗಸ್ವಾಮಿ, ಪಿಡಿಒ ಸಂಘಧ ಜಿಲ್ಲಾಧ್ಯಕ್ಷ ಕೆ. ರುಕ್ಮಾಂಗದ, ಪ್ರಕಾಶ್, ಸಂಘಗಳ ಪದಾಧಿಕಾರಿಗಳು ಇದ್ದರು.