ಫೆ.8ರಿಂದ ಬೀದರ್‌ನಲ್ಲಿ ಕಲ್ಯಾಣ ಕರ್ನಾಟಕ ಜಾಂಬೊರೇಟ್

| Published : Jan 28 2024, 01:16 AM IST

ಫೆ.8ರಿಂದ ಬೀದರ್‌ನಲ್ಲಿ ಕಲ್ಯಾಣ ಕರ್ನಾಟಕ ಜಾಂಬೊರೇಟ್
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಜಾಂಬೊರೇಟ್ ಉದ್ಘಾಟಿಸಲಿದ್ದಾರೆ. ನಗರದ ಶಾಹೀನ್ ಕಾಲೇಜಿನಲ್ಲಿ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ 5 ದಿನ ವಿವಿಧ ಚಟುವಟಿಕೆಗಳು ನಡೆಯಲಿವೆ ಎಂದು ಡಾ. ಅಬ್ದುಲ್ ಖದಿರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್

ನಗರದ ಶಾಹೀನ್ ಕಾಲೇಜಿನಲ್ಲಿ ಬರುವ ಫೆ. 8 ರಿಂದ 12 ರವರೆಗೆ ಕಲ್ಯಾಣ ಕರ್ನಾಟಕ ಭಾಗದ ಪ್ರಥಮ ಜಾಂಬೊರೇಟ್ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಉಪಾಧ್ಯಕ್ಷ ಡಾ. ಅಬ್ದುಲ್ ಖದಿರ್ ತಿಳಿಸಿದರು.

ಈ ಕುರಿತು ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಮೂರು ಸಾವಿರಕ್ಕೂ ಹೆಚ್ಚು ಸೌಟ್ಸ್, ಗೈಡ್ಸ್, ರೋವರ್ಸ್‌, ರೇಂಜರ್ಸ್‌ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಸೌಟ್ಸ್ ಅಂಡ್ ಗೈಡ್ಸ್ ಮುಖ್ಯಸ್ಥರು ಜಾಂಬೊರೇಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರತಿ ದಿನ ಬೆಳಗ್ಗೆ 6.30 ರಿಂದ ರಾತ್ರಿ 8 ರವರೆಗೆ ಸಾಹಸಮಯ, ಸಾಂಸ್ಕೃತಿಕ ಚಟುವಟಿಕೆ. ಯೋಗ, ಧ್ಯಾನ, ಜಾಥಾ, ಪಥ ಸಂಚಲನ, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಜಿಲ್ಲೆಯ ಜಾತ್ರೆಗಳ ಸನ್ನಿವೇಶ ಪ್ರದರ್ಶನ, ಜಿಲ್ಲಾ ವೈಭವ, ದೈಹಿಕ ಶಿಕ್ಷಣದ ಪ್ರದರ್ಶನ, ಲೋಕಲ್ ಟ್ಯಾಲೆಂಟ್ ಶೋ ಮೊದಲಾದ ಚಟುವಟಿಕೆಗಳು ನಡೆಯಲಿವೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತರಾದ ಡಾ.ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ಇದಕ್ಕೂ ಮುನ್ನ ನಗರದ ಬಿವಿಬಿ ಕಾಲೇಜಿನಲ್ಲಿ 1995ರಲ್ಲಿ ರಾಜ್ಯ ಸಮಟ್ಟದ ಜಾಂಬೋರೆಟ್ ಡಾ. ಎಸ್‌.ಎಸ್ ಸಿದ್ದಾರೆಡ್ಡಿ ಮುಂದಾಳತ್ವದಲ್ಲಿ ನಡೆದಿದ್ದು ಅದಾದ ನಂತರ ಈಗ ಕಲ್ಯಾಣ ಕರ್ನಾಟಕ ಜಾಂಬೋರೇಟ್ ಭಾರತ್ ಸೈಟ್ಸ್ ಮತ್ತು ಗೈಡ್ಸ್ ರಾಜ್ಯದ ಪ್ರಧಾನ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಲ್ಯಾಣ ಕರ್ನಾಟಕ ವಿಭಾಗದ ಸಂಯೋಜಕಿ ಮಲ್ಲೇಶ್ವರಿ ಜುಬಾರೆ ಮಾತನಾಡಿ, 8 ರಿಂದ 10ನೇ ತರಗತಿಯ ಮಕ್ಕಳು ಭಾಗವಹಿಸಲಿದ್ದು ಇದಲ್ಲದೇ 500 ಮಕ್ಕಳು ಪದವಿ ಕಾಲೇಜಿನವರಾಗಿದ್ದಾರೆ. ಮಕ್ಕಳಿಗೆ ಮೆಹಂದಿ, ರಂಗೋಲಿ, ಪೇಪರ್ ಕಟ್ಟಿಂಗ್, ಕೈಮಾಡಲಿಂಗ್, ಪಯೋನಿರಿಂಗ್ ಮಾಡೆಲ್ಸ್, ಬೆಂಕಿ ಇಲ್ಲದೇ ಅಡುಗೆ ತಯಾರಿಕೆ. ತರಕಾರಿ ಮಾದರಿ, ರಸಪ್ರಶ್ನೆ ಸ್ಪರ್ಧೆ, ಸೋಲಾರ್ ತಂತ್ರಜಜ್ಞಾನ, ಅಗ್ನಿ ಸುರಕ್ಷತಾ ಕ್ರಮಗಳ ಮಾಹಿತಿ. ಬಿದರಿ ಕಲೆ, ಸಿ.ಪಿ.ಆರ್. ಸುಸ್ಥಿರ ಅಭಿವೃದ್ಧಿಗಳ ತರಬೇತಿ, ಕಲರ್ ಪಾರ್ಟಿ, ಜಾನಪದ ನೃತ್ಯ. ದೇಶಭಕ್ತಿ ನೃತ್ಯ. ಎರೋಬಿಕ್ ಡ್ಯಾನ್ಸ್, ಸರ್ವಧರ್ಮ, ಪ್ರಾರ್ಥನೆ ಮೊದಲಾದವು ಜಾಂಬೊರೇಟನ ಭಾಗವಾಗಿರಲಿವೆ ಎಂದು ಹೇಳಿದರು.

ಬೀದರ್ನ ಶಹಾಪುರ ಗೇಟ್ ಸಮೀಪದ ಶಾಹೀನ್ ಕಾಲೇಜಿನಲ್ಲಿ ಈಗಾಗಲೇ ಸಿದ್ಧತಾ ಕಾರ್ಯಗಳು ಭರದಿಂದ ನಡೆದಿವೆ ಎಂದು ತಿಳಿಸಿದರು.ಫೆ. 8ಕ್ಕೆ ಉದ್ಘಾಟನೆ

ನಗರದ ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಜಾಂಬೊರೇಟ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್, ಸಚಿವ ಎನ್.ಎಸ್.ಭೋಸರಾಜು, ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್. ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸುವರು.

ಪತ್ರಿಕಾ ಗೋಷ್ಠಿಯಲ್ಲಿ ಜಾಂಬೊರೇಟ್ ಕಾರ್ಯದರ್ಶಿ ಡಾ. ಎಚ್.ಬಿ. ಭರಶೆಟ್ಟಿ, ಕ್ಯಾಂಪ್ ನಾಯಕ ರಮೇಶ ತಿಬಶೆಟ್ಟಿ, ಕ್ಯಾಂಪ್ ನಾಯಕಿ ಜೈಶೀಲಾ ಸುದರ್ಶನ ಹಾಗೂ ಇತರರಿದ್ದರು.