ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ತಮಿಳು ನಟ ಕಮಲ್ಹಾಸನ್ ಹೇಳಿಕೆ ಖಂಡಿಸಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿತಮಿಳು ನಟ ಕಮಲ್ಹಾಸನ್ ಹೇಳಿಕೆ ಖಂಡಿಸಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ನಟ ಕಮಲ್ಹಾಸನ್, ನಟಿ ರಮ್ಯಾ ಅವರ ಪ್ರತಿಕೃತಿ ಹಿಡಿದು ಅವರ ವಿರುದ್ಧ ಘೋಷಣೆ ಕೂಗುತ್ತಾ ಬಸವೇಶ್ವರ ವೃತ್ತದವರೆಗೂ ಆಗಮಿಸಿ ಬಸವೇಶ್ವರ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಂತರ ಕಮಲ್ ಹಾಸನ್ ಹಾಗೂ ರಮ್ಯಾ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಸಂತೋಷಗೌಡ ಪಾಟೀಲ ಮಾತನಾಡಿ, ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಕನ್ನಡ ವಿರೋಧಿ ನಟ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಭಾಷೆಯ ಇತಿಹಾಸವನ್ನು ನಟ ಕಮಲ್ಹಾಸನ್ ಮೊದಲು ಅರಿತುಕೊಳ್ಳಬೇಕಿದೆ. ತನ್ನ ಬೇಳೆ ಬೇಯಿಸಿಕೊಳ್ಳಲು ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಈ ನಟ ನಟಿಸಿರುವ ಚಿತ್ರವನ್ನು ರಾಜ್ಯದಲ್ಲಿ ಬಹಿಷ್ಕಾರ ಮಾಡಬೇಕು. ಒಂದು ವೇಳೆ ಚಿತ್ರವನ್ನು ಪ್ರದರ್ಶನ ಮಾಡಿದರೆ ಅಂತಹ ಚಿತ್ರಮಂದಿರದ ಮೇಲೆ ದಾಳಿ ಮಾಡಲಾಗುವದು ಎಂದು ಎಚ್ಚರಿಸಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ಕನ್ನಡ ಭಾಷೆಯ ಕುರಿತು ಹಗುರವಾಗಿ ನಟ ಕಮಲ್ ಹಾಸನ್ ಹೇಳಿಕೆ ನೀಡಿರುವುದು ಖಂಡನೀಯ. ನಟನ ಪರವಾಗಿ ನಟಿ ರಮ್ಯಾ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ. ಈ ನಟಿಯ ವರ್ತನೆಯು ಖಂಡನೀಯ. ಕನ್ನಡ ಭಾಷೆಯ ಪರವಾಗಿ ನಿಲ್ಲುವದನ್ನು ಬಿಟ್ಟು ರಮ್ಯಾ ಕನ್ನಡ ವಿರೋಧಿ ನಟನ ಪರವಾಗಿ ನಿಂತಿರುವುದು ನಾಚಿಕೆ ತರುವ ಸಂಗತಿ. ಕೂಡಲೇ ಇಬ್ಬರೂ ಕನ್ನಡಿಗರ ಕ್ಷಮೆ ಕೋರಬೇಕು. ಒಂದು ವೇಳೆ ಕ್ಷಮೆ ಕೇಳದೇ ಹೋದರೆ ರಾಜ್ಯದಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಕರವೇಯ ಸಿದ್ದು ಮೇಟಿ, ಆನಂದ ಕಾಖಂಡಕಿ, ಮಡುಗೌಡ ಭಾವಿಕಟ್ಟಿ, ಅನಿಲ ಜುಗತಿ, ಮಹಿಬೂಬ ಟಕ್ಕಳಕಿ, ರವಿ ವಡ್ಡರ, ಇಮಾಮಸಾಬ ಇಂಗಳೇಶ್ವರ, ಯಲ್ಲಪ್ಪ ಬೇಲಿ, ಅಬ್ದುಲರಜಾಕ ಇನಾಮದಾರ ಸೇರಿದಂತೆ ಇತರರು ಭಾಗವಹಿಸಿದ್ದರು.