ಸಾರಾಂಶ
ದೊಡ್ಡಬಳ್ಳಾಪುರ: ಕನ್ನಡ ಹುಟ್ಟಿದ್ದೇ ತಮಿಳಿನಿಂದ ಎಂಬ ಬಾಲಿಶ ಹೇಳಿಕೆ ನೀಡಿರುವ ನಟ ಕಮಲ್ಹಾಸನ್ ಅವರ ಹೇಳಿಕೆ ಖಂಡಿಸಿ ಇಲ್ಲಿನ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಕನ್ನಡಪರ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಡಿ ಕ್ರಾಸ್ನ ಡಾ.ರಾಜ್ಕುಮಾರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರರು, ಕನ್ನಡಕ್ಕೆ ತನ್ನದೇ ಆದ ಅನನ್ಯತೆ ಇದೆ. ಅಭಿಜಾತ ಭಾಷೆ ಇದಾಗಿದ್ದು, ಕನ್ನಡದ ಇತಿಹಾಸ ಪರಂಪರೆಯ ಅರಿವಿಲ್ಲದೆ ಕಮಲಹಾಸನ್ ನೀಡಿರುವ ಹೇಳಿಕೆ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ. ಕಲಾವಿದರು ಕಲಾವಿದರಂತೆ ಇರಬೇಕೇ ವಿನಃ ಭಾಷಾತಜ್ಞರ ರೀತಿ ವರ್ತಿಸಿ ಇಂತಹ ಅನಾಹುತಗಳಿಗೆ ಕಾರಣವಾಗಬಾರದು ಎಂದು ಹೇಳಿದರು.ಕನ್ನಡ ಭಾಷೆಯ ಮೂಲದ ಬಗ್ಗೆ ಅವೈಜ್ಞಾನಿಕ ಹೇಳಿಕೆ ನೀಡಿರುವ ಅವರು, ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಕನ್ನಡಿಗರ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಅವರ ಹೊಸ ಚಿತ್ರ ಥಗ್ ಲೈಫ್ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಕನ್ನಡ ಸಂಘಟನೆಗಳು, ಕನ್ನಡ ಚಿತ್ರರಂಗ ಕಮಲ್ಹಾಸನ್ ಅವರ ಸಂಕಷ್ಟದ ಕಾಲದಲ್ಲಿ ಕೈಹಿಡಿದಿದೆ. ಕರ್ನಾಟಕದಲ್ಲಿಯೂ ಅವರ ಕಲಾಪ್ರತಿಭೆಯನ್ನು ಪ್ರೋತ್ಸಾಹಿಸಿ ಮೆಚ್ಚಿರುವ ಹಲವು ಅಭಿಮಾನಿಗಳಿದ್ದಾರೆ. ನಟರು ಭಾಷಾ ಸಾಮರಸ್ಯ ಬೆಳೆಸುವ ಶಕ್ತಿಯಾಗಬೇಕೇ ವಿನಃ ಅನಗತ್ಯವಾಗಿ ಗೊಂದಲ ಸೃಷ್ಟಿಸಿ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡಬಾರದು ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ಕನ್ನಡ ಸಂಘಟನೆಗಳ ಮುಖಂಡರಾದ ಡಿ.ಸಿ.ಚೌಡರಾಜು, ಸುರೇಶ್ರಾವ್, ಅಪ್ಪಿ ವೆಂಕಟೇಶ್, ಮಂಜುನಾಥ್ ಇತರರು ಹಾಜರಿದ್ದರು.ಬಾಕ್ಸ್....................
ಶಿವರಾಜ್ಕುಮಾರ್ ತಮಿಳು ಭಾಷಣ ವಿಷಾದನೀಯ:ಥಗ್ ಲೈಫ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದ ನಟ ಶಿವರಾಜ್ಕುಮಾರ್ ತಮಿಳು ಭಾಷೆಯಲ್ಲಿ ಮಾತನಾಡಿರುವುದು ವಿಷಾದನೀಯ. ಡಾ.ರಾಜ್ಕುಮಾರ್ ಅವರು ಈ ಹಿಂದೆ ಎಲ್ಲೇ ಹೋದರೂ ಕನ್ನಡದ ಅಸ್ಮಿತೆಯ ಸಂಕೇತವಾಗಿ ನಿಲ್ಲುತ್ತಿದ್ದರು. ಎಂಜಿಆರ್, ಎನ್ಟಿಆರ್ ಮುಂತಾದವರ ದಿಗ್ಗಜರ ಜೊತೆ ವೇದಿಕೆ ಹಂಚಿಕೊಂಡಾಗಲೂ ಕನ್ನಡದಲ್ಲೇ ಮಾತನಾಡಿರುವುದು ಇತಿಹಾಸ. ಆ ಅನನ್ಯ ಮಾದರಿಯನ್ನು ಮುಂದುವರೆಸಿಕೊಂಡು ಹೋಗುವುದು ಪ್ರಸ್ತುತ ಮಹತ್ವದ ಕೆಲಸವಾಗಿದೆ ಎಂದು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ಅಭಿಪ್ರಾಯಪಟ್ಟರಿದ್ದಾರೆ.28ಕೆಡಿಬಿಪಿ1-
ದೊಡ್ಡಬಳ್ಳಾಪುರದ ಡಿಕ್ರಾಸ್ನ ಡಾ.ರಾಜ್ಕುಮಾರ್ ವೃತ್ತದಲ್ಲಿ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಕಮಲಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.