ಸಾರಾಂಶ
ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಯ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ಪ್ರವೀಣಶೆಟ್ಟಿ ಬಣ) ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಯ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ಪ್ರವೀಣಶೆಟ್ಟಿ ಬಣ) ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಟ ಕಮಲ್ಹಾಸನ್ ಕನ್ನಡ ಭಾಷಾ ಕುರಿತು ನೀಡಿರುವ ಹೇಳಿಕೆ ಅತ್ಯಂತ ಬಾಲಿಶವಾದದ್ದು. ಇತಿಹಾಸ ಪ್ರಜ್ಞೆಯಿಲ್ಲದ ತಮಿಳುನಟನ ಹೇಳಿಕೆಯನ್ನು ಪ್ರತಿಯೊಬ್ಬ ಕನ್ನಡಿಗರು ಖಂಡಿಸಿದ್ದಾರೆ. ಕೂಡಲೇ ಕಮಲ್ ಹಾಸನ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಈತನ ಸಿನಿಮಾಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಯಾವುದೇ ಚಿತ್ರಮಂದಿರಗಳು ಈ ನಟ ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಒತ್ತಾಯಿಸಿದರು.
ಕನ್ನಡಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವಿದೆ. ಕನ್ನಡ ಯಾವುದೇ ಭಾಷೆಯಿಂದ ಹುಟ್ಟಿದ್ದಲ್ಲ. ಕನ್ನಡ ಭಾಷಾ ಹುಟ್ಟು ಕುರಿತು ದೇಶದ ಅನೇಕ ಇತಿಹಾಸಕಾರರು ಸಂಶೋಧನೆಗಳ ಮೂಲಕ ಖಚಿತಪಡಿಸಿದ್ದಾರೆ. ಆದರೆ, ಇತಿಹಾಸ ಗೊತ್ತಿಲ್ಲದ ನಟನೊಬ್ಬ ಸಮಾರಂಭದ ವೇದಿಕೆಯೊಂದರಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ ಎಂದರಲ್ಲದೆ, ಕೂಡಲೇ ಕರ್ನಾಟಕ ಚಲನಚಿತ್ರ ಮಂಡಳಿ ನಟ ಕಮಲ್ ಹಾಸನ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಈತನ ಯಾವುದೇ ಸಿನಿಮಾಗಳು ರಾಜ್ಯದಲ್ಲಿ ಪ್ರದರ್ಶನವಾಗಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಹುಲುಗಪ್ಪ, ರಾಜ್ಯ ಸಂಚಾಲಕ ಅದ್ದಿಗೇರಿ ರಾಮಣ್ಣ, ಜಿಲ್ಲಾ ಪ್ರಮುಖರಾದ ಕೆ.ವೆಂಕಟೇಶ್, ಆನಂದ್, ವೀರಾರೆಡ್ಡಿ, ರಾಮಾಂಜಿನಿ ಮತ್ತಿತರರು ಭಾಗವಹಿಸಿದ್ದರು.