ಸಿಎಂ ರಾಜೀನಾಮೆಗೆ ಕಮಲ ಪಡೆ ಆಗ್ರಹ

| Published : Aug 23 2024, 01:04 AM IST

ಸಾರಾಂಶ

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ಸಿಗರು ಹರಿಹಾಯುತ್ತಿರುವುದನ್ನು ವಿರೋಧಿಸಿ ಹಾಗೂ ಮುಡಾ ಹಗರಣದ ಪಾರದರ್ಶಕ ತನಿಖೆಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿಗರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ಸಿಗರು ಹರಿಹಾಯುತ್ತಿರುವುದನ್ನು ವಿರೋಧಿಸಿ ಹಾಗೂ ಮುಡಾ ಹಗರಣದ ಪಾರದರ್ಶಕ ತನಿಖೆಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿಗರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಆರಂಭಗೊಂಡ ಮೆರವಣಿಗೆ ಜಿಲ್ಲಾಡಳಿತ ಭವನ ಎದುರು ಸಭೆಯಾಗಿ ಮಾರ್ಪಟ್ಟಿತು. ಪ್ರತಿಭಟನಾ ಸಭೆ ಉದ್ದೇಶಿಸಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಮುಡಾ ಹಗರಣದ ನ್ಯಾಯಯುತ ತನಿಖೆಗೆ ಅವಕಾಶ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪಾರದರ್ಶಕ ತನಿಖೆ, ಜನತೆಯ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದು ಒಳ್ಳೆಯದ್ದು ಎಂದು ಅವರು ಕಿವಿಮಾತು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಮುಡಾ ಹಗರಣದಲ್ಲಿ ನೇರವಾಗಿ ನಿಮ್ಮ ಕುಟುಂಬವೇ ಭಾಗಿಯಾಗಿದ್ದು ನಿವೇಶನ ಹಂಚಿಕೆಯಲ್ಲಿ ನಿಮ್ಮದೇ ಪಾತ್ರವಿದೆ ಎನ್ನುವುದು ಮೇಲ್ನೋಟಕ್ಕೆ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ವಿಪ ಸದಸ್ಯ ಪಿ.ಎಚ್.ಪೂಜಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡು, ಕಳೆದುಕೊಂಡ ಜಾಗೆಯ ಎರಡರಷ್ಟು ತೆಗೆದುಕೊಳ್ಳಲು ಅವಕಾಶವಿದ್ದು ಅದನ್ನು ಮೀರಿ 50-50 ಅನುಪಾತದಲ್ಲಿ 16 ಸೈಟುಗಳನ್ನು ತೆಗೆದುಕೊಂಡಿದ್ದೀರಿ. ಇದರಲ್ಲಿ ನಿಮ್ಮ ಪಾತ್ರ ಇರಲೇ ಬೇಕು ಎಂದು ದೂರಿದರು.

ಕಳೆದುಕೊಂಡ ಪ್ರದೇಶದಲ್ಲಿಯೇ ನಿವೇಶನ ಪಡೆದುಕೊಳ್ಳಬೇಕು. ಅದುಬಿಟ್ಟು, ಮನಸಿಗೆ ಬಂದಲ್ಲಿ ಜಾಗ ಪಡೆದುಕೊಂಡರೆ ಹೇಗೆ? ಅದು ಕಾನೂನು ಉಲ್ಗಂಘನೆ ಅಲ್ಲವೇ ಎಂದು ಪ್ರಶ್ನಿಸಿದರು. ನಿಮಗೆ ಕಿಂಚಿತ್ತಾದರೂ ಗೌರವ, ಸ್ವಾಭಿಮಾನ ಇದ್ದರೆ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಪಾರದರ್ಶಕ ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮೊದಲಾದವರು ಮಾತನಾಡಿ, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಎಂ.ಎಸ್.ದಡ್ಡೇನವರ್, ಮಲ್ಲಯ್ಯ ಮೂಗನೂರಮಠ, ಬಸವರಾಜ ಯಂಕಂಚಿ, ಡಾ.ಶೇಖರ ಮಾನೆ, ಸತ್ಯನಾರಾಯಣ ಹೇಮಾದ್ರಿ, ಅರುಣ ಕಾರಜೋಳ, ಬಸವರಾಜ ಶಂಭುಗೌಡ ಪಾಟೀಲ, ಚಂದ್ರಕಾಂತ ಕೇಸನೂರ, ಶಿವಾನಂದ ಸುರಪೂರ, ರಾಜು ನಾಯಕ ಸೇರಿದಂತೆ ನಗರಸಭೆ ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ಕಾರ್ಯ ಕರ್ತರು ಭಾಗವಹಿಸಿದ್ದರು.