ಕೊಪ್ಪ ನಾದಬ್ರಹ್ಮ ಸಂಗೀತ ಮತ್ತು ನೃತ್ಯ ಸಂಸ್ಥೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕನಕ ಜಯಂತಿ ಕಾರ್ಯಕ್ರಮ ನಡೆಯಿತು.
ಕೊಪ್ಪ: ಕೊಪ್ಪ ನಾದಬ್ರಹ್ಮ ಸಂಗೀತ ಮತ್ತು ನೃತ್ಯ ಸಂಸ್ಥೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕನಕ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಶ್ರೀನಿಧಿ ದಿನೇಶ್, ಕನಕದಾಸರು ತಮ್ಮ ರಚನೆಗಳ ಮೂಲಕ ಸಮಾಜ ಸುಧಾರಣೆ ಹಾಗೂ ಜನರಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿದರು ಎಂದರು.ನಾದಬ್ರಹ್ಮ ಸಂಸ್ಥೆಯು ಕಳೆದ ಮೂವತ್ತೈದು ವರ್ಷಗಳಿಂದ ಈ ರೀತಿಯ ದಾಸರ ಆರಾಧನೆಯನ್ನು ಮಾಡುತ್ತಾ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ಜೆ.ಎಂ.ಶ್ರೀ ಹರ್ಷ ಮಾತನಾಡಿ, ಕನಕ ಜಯಂತಿಯ ಆಚರಣೆ ಹಾಗೂ ಅವರ ರಚನೆಗಳ ಸಾಹಿತ್ಯಾರ್ಥ ತಿಳಿಯುವುದರಿಂದ ಸಮಾಜದಲ್ಲಿ ಶಾಂತಿ ಸದ್ಭಾವನೆ ಬೆಳೆಯುತ್ತದೆ ಎಂದರು.ನಾದಬ್ರಹ್ಮ ಸಂಸ್ಥೆಯ ವಿದ್ಯಾರ್ಥಿಗಳು ಕನಕದಾಸರ ರಚನೆಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಆರ್.ಡಿ.ರವೀಂದ್ರ, ಕೊಪ್ಪ ರೋಟರಿ ಸಂಸ್ಥೆಯ ಮಯೂರ ರಾಘವೇಂದ್ರ ಭಟ್, ದಿನೇಶ್, ಭರತನಾಟ್ಯ ಕಲಾವಿದೆ ಸುನೀತಾ, ನವೀನ್, ಸಂಸ್ಥೆಯ ಟ್ರಸ್ಟಿ ಶೋಭಾ, ಶ್ರೀನಿಧಿ ಮುಂತಾದವರು ಉಪಸ್ಥಿತರಿದ್ದರು.
ವಿದ್ವಾನ್ ರಮೇಶ್ ಉಪಾಧ್ಯಾಯ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ವಿದ್ವಾನ್ ಶ್ರೀನಿಧಿ ಕೊಪ್ಪ ನಿರೂಪಿಸಿದರು. ವಂದನಾರ್ಪಣೆ ಮಾಡಿದರು.