ಸಾರಾಂಶ
ದೇವನಹಳ್ಳಿ: ಕನಕ ಜಯಂತಿಯನ್ನು ಎಂದಿಗೂ ದಾಸ ಶ್ರೇಷ್ಠರೆಂದು ಬಳಸದೆ ಸಂತ ಶ್ರೇಷ್ಠ ಎಂದು ಬಳಸಬೇಕು ಎಂದು ಹುಲಿಕುಂಟೆ ಮೂರ್ತಿ ಹೇಳಿದರು.
ಇಲ್ಲಿನ ಡಾ.ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ತಾಲೂಕು ಆಡಳಿತಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾರು ಭಾರತದ ತಳ ಸಮುದಾಯದ ಚರಿತ್ರೆಯನ್ನು ಅಧ್ಯಯನ ಮಾಡುತ್ತಾರೋ ಅವರು ಕನಕದಾಸರನ್ನು ಕೇವಲ ಕೀರ್ತನಕಾರರು ಎಂದು ಗಂಟು ಹಾಕೋಕೆ ಆಗಲ್ಲ. ಸಾಮಾಜಿಕ ಹೋರಾಟಗಾರರು, ಸಮಾಜದಲ್ಲಿ ಅವರು ಮಾಡಿರುವ ಕೆಲಸ ಮತ್ತಾರು ಮಾಡಿಲ್ಲ. ಹಾಗಾಗಿ ಅವರೊಬ್ಬ ಸಮಾಜ ಸುಧಾರಕರು. ಅವರನ್ನು ಯಾರೂ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ಸಂದೇಶಗಳು ಎಂದಿಗೂ ಸಾರ್ವಕಾಲಿಕವಾದವು. ಪ್ರತಿಯೊಬ್ಬರೂ ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕನಕದಾಸರು ಬಹಳ ಮುಖ್ಯವಾಗಿ ಕುಲಕುಲಗಳ ಮಧ್ಯೆ ವ್ಯತ್ಯಾಸವಿಲ್ಲ. ಎಲ್ಲರೂ ಒಂದೇ ಎಂದು ಹೇಳುತ್ತಾರೆ. ಕನಕದಾಸರು ವ್ಯಾಸರ ಜೊತೆಯಿದ್ದ ಸಂದರ್ಭದ ಅನೇಕ ಘಟನೆಗಳಲ್ಲಿ ಬ್ರಾಹ್ಮಣ ಸಮಾಜ ಸಹ ಕನಕರು ಒಬ್ಬ ಜ್ಞಾನಿ ಎಂದು ತಿಳಿಸಿದ್ದಾರೆ. ಕನಕದಾಸರು ಮೇಲು ಕೀಳೆಂಬ ಭಾವನೆಯನ್ನು ಹೋಗಲಾಡಿಸಿ ಜನರ ಕಣ್ತೆರಿಸಿ ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಮಾಜದಲ್ಲಿ ಅಂತಹ ಸಂತ ಶ್ರೇಷ್ಠರು ಮತ್ತೊಬ್ಬರಿಲ್ಲ. ಪ್ರತಿಯೊಬ್ಬರೂ ಕನಕದಾಸರ ಜೀವನ ಚರಿತ್ರೆ ಓದಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ವಕೀಲ ರಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಶಾಂತಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್, ವಿ. ಮಂಜುನಾಥ್, ವಿ.ನಾರಾಯಣಸ್ವಾಮಿ, ಪ್ರಸನ್ನಕುಮಾರ್, ಜಿ.ಎ.ರವೀಂದ್ರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ಅನುರಾಧ, ಜಿಪಂ ಉಪ ಕಾರ್ಯದರ್ಶಿ ರಮೇಶ್, ತಹಸೀಲ್ದಾರ್ ಬಾಲಕೃಷ್ಣ, ತಾಲೂಕು ಪಂಚಾಯಿತಿ ಇಒ ಶ್ರೀನಾಥಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಪಿ.ರಾಮು, ಇತರರು ಉಪಸ್ಥಿತರಿದ್ದರು.
(ಫೋಟೋ ಕ್ಯಾಫ್ಷನ್)ದೇವನಹಳ್ಳಿಯ ಡಾ.ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ತಾಪಂ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.