ಸಾರಾಂಶ
ಕೊಪ್ಪಳ: ಮಾ.2, 3ರಂದು ನಡೆಯುವ ಕನಕನಗಿರಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸಿಎಂ ಆಗಮಿಸುವುದು ಪಕ್ಕಾ ಆಗಿದೆ. ಹೀಗಾಗಿ, ಅಗತ್ಯ ಸಿದ್ಧತೆಯನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳಿ ಎಂದು ಕಟ್ಟುನಿಟ್ಟಿನಿಂದ ಸೂಚಿಸಿದರು.ಜಿಲ್ಲೆಯಲ್ಲಿ 8 ವರ್ಷಗಳ ನಂತರ ಕನಕಗಿರಿ ಉತ್ಸವ ಆಚರಿಸಲಾಗುತ್ತಿದ್ದು, ಉತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರು, ಕಲಾವಿದರು, ಕ್ರೀಡಾಪಟುಗಳು, ಅತಿಥಿಗಳಿಗೆ ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟು ವ್ಯವಸ್ಥೆಯನ್ನು ಮಾಡುವುದರ ಮೂಲಕ ಅದ್ಧೂರಿ ಉತ್ಸವ ಆಚರಣೆಗೆ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.ಉತ್ಸವದ ಅಂಗವಾಗಿ ಫೆ.28, 29ರಂದು ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುಗಳು, ಸ್ಥಳೀಯ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸೂಕ್ತ ವಸತಿ ವ್ಯವಸ್ಥೆ, ಊಟ, ಉಪಹಾರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕ್ರೀಡಾ ಸಮಿತಿ ನಿರ್ವಹಿಸಬೇಕು. ಕುಸ್ತಿ, ಹಗ್ಗ ಜಗ್ಗಾಟ, ಕಬಡ್ಡಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳೊಂದಿಗೆ ವಾಲಿಬಾಲ್ನಂತಹ ಕ್ರೀಡೆಗಳನ್ನು ಕ್ರೀಡಾಕೂಟದಲ್ಲಿ ಆಡಿಸಬೇಕು. ಕನಕಗಿರಿ ಪಟ್ಟಣದ ರುದ್ರಸ್ವಾಮಿ ಪ್ರೌಢಶಾಲೆಯ ಆವರಣ ಹಾಗೂ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಮೈದಾನವನ್ನು ಸಿದ್ಧಪಡಿಸಬೇಕು ಎಂದು ಕ್ರೀಡಾ ಸಮಿತಿ ಅಧಿಕಾರಿಗಳಿಗೆ ಸೂಚಿಸಿದರು.
ಉತ್ಸವದಲ್ಲಿ ಕಲಾವಿದರು ತಮ್ಮ ಕಲೆ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಎರಡು ವೇದಿಕೆಗಳನ್ನು ರೂಪಿಸಲಾಗಿದೆ. ಉಡಚಪ್ಪ ನಾಯಕ ವೇದಿಕೆ ಹಾಗೂ ಕನಕಾಚಲ ಗುಡಿಯ ಬಲಭಾಗದಲ್ಲಿ ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ವೇದಿಕೆಯನ್ನು ಸಿದ್ದಪಡಿಸಲಾಗುತ್ತದೆ. ಎರಡೂ ವೇದಿಕೆಗಳಲ್ಲಿ ಪ್ರತ್ಯೇಕವಾಗಿ 50 ಕಲಾತಂಡಗಳು ಭಾಗವಹಿಸಬಹುದಾಗಿದೆ. ವೇದಿಕೆಯ ಅಲಂಕಾರ, ಆಮಂತ್ರಣ ಪತ್ರಿಕೆಗಳ ತಯಾರಿ, ಶಿಷ್ಠಾಚಾರ ಪಾಲನೆ ಕುರಿತಂತೆ ಸಮಿತಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಶಿಷ್ಟಾಚಾರದಂತೆ ಎಲ್ಲ ಗಣ್ಯರನ್ನು ಆಹ್ವಾನಿಸಬೇಕು ಎಂದರು.ಮೆರವಣಿಗೆಯು ಪಟ್ಟಣದ ಕಲ್ಮಠದಿಂದ ರಥಬೀದಿಯಿಂದ ಚಾಲನೆಗೊಂಡು ಕನಕಾಚಲಪತಿ ದೇವಸ್ಥಾನ, ಬಸ್ ಸ್ಟಾö್ಯಂಡ್ ಮಾರ್ಗವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಮೆರವಣಿಗೆಯು 15 ಕಲಾತಂಡಗಳು, ವಿವಿಧ ಶಾಲೆಗಳಿಂದ ಸ್ತಬ್ಧಚಿತ್ರಗಳೊಂದಿಗೆ 1 ಕಿ.ಮೀ. ವರೆಗೆ ಸಾಗುತ್ತದೆ. ಉತ್ಸವದ ವೇದಿಕೆಗಳು, ಮೆರವಣಿಗೆ ಹಾಗೂ ಪಟ್ಟಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಆರೋಗ್ಯ ಇಲಾಖೆಯಿಂದ ಎರಡು ದಿನಗಳ ಕಾಲ 24*7 ವೈದ್ಯಕೀಯ ಸೇವೆ ಒದಗಿಸಬೇಕು. ತುರ್ತುಪರಿಸ್ಥಿತಿ ನಿರ್ವಹಣೆಗೆ ಆ್ಯಂಬುಲೆನ್ಸ್ ಒದಗಿಸಬೇಕು ಎಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಉತ್ಸವ ಮುಗಿಯುವವರೆಗೂ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು. ಪ್ರಮುಖ ಬೀದಿ, ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಕೈಗೊಳ್ಳಬೇಕು. ಫಲಪುಷ್ಪ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನಕ್ಕೆ ಕ್ರಮ ವಹಿಸಬೇಕು. ಪ್ರಮುಖ ವಿಷಯಗಳ ಕುರಿತು ವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ಸ್ಥಾಪಿಸಬೇಕು. ಭಾಗವಹಿಸುವ ಸಾರ್ವಜನಿಕರಿಗೂ ಊಟ ಹಾಗೂ ಉಪಹಾರದ ವ್ಯವಸ್ಥೆ ಕಲ್ಪಿಸಬೇಕು. ಒಟ್ಟಿನಲ್ಲಿ ಅದ್ದೂರಿ ಕನಕಗಿರಿ ಉತ್ಸವಕ್ಕೆ ಎಲ್ಲ ಅಧಿಕಾರಿಗಳು ಆಸಕ್ತಿ ಹಾಗೂ ಬದ್ಧತೆಯಿಂದ ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಉತ್ಸವನ್ನು ಯಶಸ್ವಿಗೊಳಿಸಿ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಎಸಿ ಕ್ಯಾ.ಮಹೇಶ್ ಮಾಲಗಿತ್ತಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.