ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಕನಕದಾಸರ ತಾತ್ವಿಕತೆಯ ಚಿಂತನೆ, ಸಂಗೊಳ್ಳಿ ರಾಯಣ್ಣನ ಧೈರ್ಯ ಹಾಗೂ ಇದೇ ಸಮುದಾಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಚಾಣಕ್ಯತನ ಮಾದರಿಯಾಗಿದ್ದು, ಮಹನೀಯರ ಆದರ್ಶ ನಮಗೆಲ್ಲ ಸ್ಫೂರ್ತಿಯಾಗಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ನಗರದ ಡಾ. ರಾಜ್ಕುಮಾರ್ ರಸ್ತೆಯ ರಾಘವ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಸಂತ ಶ್ರೇಷ್ಠ ಕವಿ ಭಕ್ತ ಕನಕದಾಸ 536ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನಕದಾಸರ ಆಧ್ಯಾತ್ಮಿಕ ವಿಷಯಗಳಿಂದ ಸಮಾಜ ಸುಧಾರಣೆಗೆ ಶ್ರಮಿಸಿದರು. ಅದೇ ರೀತಿ ಸಂಗೊಳ್ಳಿ ರಾಯಣ್ಣನಂತಹ ಪರಾಕ್ರಮಿಯು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಯುದ್ಧಗಳನ್ನು ಎದುರಿಸಿದನು. ಮುಖ್ಯಮಂತ್ರಿಯವರು ಅದೇ ಸಮುದಾಯದವರಾಗಿದ್ದು, ನಾಡಿನ ಅಭಿವೃದ್ಧಿಗೆ ಒತ್ತು ನೀಡಿ, ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಕನಕದಾಸರು ಹಲವಾರು ವಚನ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನಕದಾಸರು ಸಮಾಜದ ಒಳಿತಿಗಾಗಿ ಶ್ರಮಿಸಿದವರಾಗಿದ್ದು, ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬರ ಜೀವನ ಸುಗಮವಾಗುತ್ತದೆ ಎಂದರು.ಕನ್ನಡ ಪ್ರಾಧ್ಯಾಪಕ ಬಿ. ಎರ್ರಿಸ್ವಾಮಿ ಅವರು ಕನಕದಾಸ ಜಯಂತಿಯ ವಿಶೇಷ ಉಪನ್ಯಾಸ ನೀಡಿ, ಕುಲ- ಕುಲ ಎಂದು ಹೊಡೆದಾಡದಿರಿ, ದೇಹ, ಆತ್ಮ, ಗಾಳಿ, ನೀರು, ಬೆಳಕು ಇವುಗಳಿಗೆ ಯಾವ ಕುಲವಿದೆ ಎಂದು ತಿಳಿಸಿಕೊಟ್ಟ ಮಹಾನ್ ಸಂತರು ಎಂದರು.ಉಪಮೇಯರ್ ಬಿ. ಜಾನಕಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಪಾಲಿಕೆ ಸದಸ್ಯೆ ಈರಮ್ಮ ಸುರೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಹೊನ್ನುರಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಗಾದಿಲಿಂಗನಗೌಡ ಸೇರಿದಂತೆ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಸಂಭ್ರಮದ ಮೆರವಣಿಗೆ...
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಗುರುವಾರ ಕನಕದಾಸ ಜಯಂತ್ಯುತ್ಸವದ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು.ನಗರದ ಅಗ್ನಿಶಾಮಕದಳ ಕಚೇರಿ ಹತ್ತಿರ ಕನಕದಾಸ ವೃತ್ತದ ಭಕ್ತ ಕನಕದಾಸ ಅವರ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿದರು. ಡಮರುಗ, ಡೊಳ್ಳು ಬಾರಿಸಿ ಸಂಭ್ರಮಿಸುವ ಮೂಲಕ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಉಪ ಮೇಯರ್ ಬಿ. ಜಾನಕಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಇತರರು ಇದ್ದರು.ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕಹಳೆ ವಾದನ, ಗೊರವರ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನಸೆಳೆದವು.ಜಯಂತಿಯ ಮೆರವಣಿಗೆಯು ಕನಕದಾಸ ವೃತ್ತದಿಂದ ಆರಂಭವಾಗಿ ಎಸ್ಪಿ ಸರ್ಕಲ್ ಮಾರ್ಗವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ರಾಘವ ಕಲಾ ಮಂದಿರದ ವೇದಿಕೆ ಸಭಾಂಗಣದವರೆಗೆ ತಲುಪಿತು.