ಹೊನ್ನಾವರದಲ್ಲಿ ಕಾಂಡ್ಲಾ ಪರಿಸರ ವ್ಯವಸ್ಥೆ ಸಂರಕ್ಷಣಾ ದಿನ
ಕನ್ನಡಪ್ರಭ ವಾರ್ತೆ ಹೊನ್ನಾವರ
ಜಾಗತಿಕ ತಾಪಮಾನ ತಡೆಗಟ್ಟಲು ಅತ್ಯಂತ ಸೂಕ್ಷ್ಮ ವ್ಯವಸ್ಥೆ ಇದ್ದರೆ ಅದು ಕಾಂಡ್ಲಾ ಸಸ್ಯಗಳು. ಕಡಲ್ಕೊರೆತ ತಡೆಗಟ್ಟುವಲ್ಲಿ ಹಾಗೂ ಪರಿಸರದಲ್ಲಿರುವ ಕಾರ್ಬನ್ ಅಂಶ ಕಡಿಮೆ ಮಾಡಲು ಕಾಂಡ್ಲಾ ಸಸ್ಯಗಳು ಸಹಾಯಕ ಎಂದು ಹೊನ್ನಾವರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ನುಡಿದರು.
ಅರಣ್ಯ ಇಲಾಖೆ ಹೊನ್ನಾವರ ವಿಭಾಗ, ಹೊನ್ನಾವರ ಉಪ ವಿಭಾಗ, ಹೊನ್ನಾವರ ವಲಯ ಹಾಗೂ ಹೊನ್ನಾವರದ ಎಸ್ಡಿಎಂ ಪದವಿ ಕಾಲೇಜು ಸಹಯೋಗದಲ್ಲಿ ಎಸ್ಡಿಎಂ ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಕಾಂಡ್ಲಾ ಪರಿಸರ ವ್ಯವಸ್ಥೆ ಸಂರಕ್ಷಣಾ ದಿನ -2026 ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಸಮತೋಲನಕ್ಕೆ ಕಾಂಡ್ಲಾ ಸಸ್ಯಗಳು ಮಹತ್ವದ್ದಾಗಿದೆ. ಸಮುದ್ರದ ಉಬ್ಬರ ಮತ್ತು ಇಳಿತ ನಿಯಂತ್ರಿಸುತ್ತದೆ. ಕಾಂಡ್ಲಾ ಸಸ್ಯಗಳು ನಾಶವಾದರೆ ವಾತಾವರಣದಲ್ಲಿ ಕಾರ್ಬನ್ ಅಂಶಗಳು ಹೆಚ್ಚಾಗುತ್ತವೆ. ಜಲಜೀವಿಗಳ ಹುಟ್ಟು ಮತ್ತು ಬೆಳವಣಿಗೆಗೆ ಕಾಂಡ್ಲಾ ತನ್ನದೆ ಆದ ಕೊಡುಗೆ ನೀಡುತ್ತದೆ ಎಂದು ಹೇಳಿದರು. ನಾವು ಕಾಂಡ್ಲಾ ರಕ್ಷಣೆ ಮಾಡುವ ಪಣ ತೊಡಬೇಕು. ಇರುವ ಕಾಂಡ್ಲಾ ಸಸ್ಯ ಹಾಳು ಮಾಡಬಾರದು. ಪರಿಸರಕ್ಕೆ ನಾವು ಭಾರವಾಗಿರಬಾರದು. ಯುವ ಸಮುದಾಯ ಕಾಂಡ್ಲಾ ರಕ್ಷಣೆ ಕಡೆ ಗಮನ ಹರಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ, ಕಾರವಾರದ ಸಮುದ್ರ ಜೀವಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಶಿವಕುಮಾರ್ ಹರಗಿ ಹಾಗೂ ಹಳಿಯಾಳ ವಿಭಾಗದ ಉಪವಲಯ ಅರಣ್ಯಾಧಿಕಾರಿ ವ ಮೋಜಣಿದಾರ ಚಂದ್ರಶೇಖರ ಕಟ್ಟಿಮನಿ ಉಪನ್ಯಾಸ ನೀಡಿದರು. ಅಂತಾರಾಷ್ಟ್ರೀಯ ಕಾಂಡ್ಲಾ ಪರಿಸರ ವ್ಯವಸ್ಥೆ ಸಂರಕ್ಷಣಾ ದಿನ -2026ಕ್ಕೆ ಸಂಬಂಧಿಸಿ ತಾಲೂಕಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯ ಡಾ. ಜಿ.ಎನ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಆರ್ಎಫ್ಒ ಪ್ರಮೋದ್ ನಾಯಕ್ ಸ್ವಾಗತಿಸಿದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ್ ಎಸ್. ವಂದಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರೂಪಿಸಿದರು.