ಕನ್ನಡ ಪುಸ್ತಕ ಪರಿಷತ್ ಸಮ್ಮೇಳನ ನಾಳೆ

| Published : Nov 18 2025, 02:15 AM IST

ಸಾರಾಂಶ

ಕನ್ನಡ ಪುಸ್ತಕ ಪರಿಷತ್‌ ವತಿಯಿಂದ ನ.19ರಂದು ನಗರದ ಪ್ರಗತಿ ಶಾಲೆಯ ಆವರಣದಲ್ಲಿ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನ-2025 ಆಚರಿಸಲಾಗುತ್ತಿದೆ ಎಂದು ಪರಿಷತ್‌ ಪ್ರಧಾನ ಕಾರ್ಯದರ್ಶಿ ಶಂಕರ ಬೈಚಬಾಳ‌ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡ ಪುಸ್ತಕ ಪರಿಷತ್‌ ವತಿಯಿಂದ ನ.19ರಂದು ನಗರದ ಪ್ರಗತಿ ಶಾಲೆಯ ಆವರಣದಲ್ಲಿ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನ-2025 ಆಚರಿಸಲಾಗುತ್ತಿದೆ ಎಂದು ಪರಿಷತ್‌ ಪ್ರಧಾನ ಕಾರ್ಯದರ್ಶಿ ಶಂಕರ ಬೈಚಬಾಳ‌ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ ಭವ್ಯ ಮೆರವಣಿಗೆ ನಡೆಯಲಿದೆ. ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷ ಉಮೇಶ ಕವಲಗಿ ಚಾಲನೆ ನೀಡಲಿದ್ದಾರೆ. ಕಲಾವಿದ ಶಬ್ಬೀರ್ ನದಾಫ್ ನೇತ್ರತ್ವದಲ್ಲಿ ಚಿತ್ರಕಲಾ ಪ್ರದರ್ಶನ ಜರುಗಲಿದೆ. ಸಾಹಿತಿ ಸಿದ್ದಲಿಂಗ ಮನಹಳ್ಳಿ ಸರ್ವಾಧ್ಯಕ್ಷರಾಗಿರುವ ಸಮ್ಮೆಳನವನ್ಮು ಕಲಬುರಗಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಎಚ್.ಟಿ.ಪೋತೆ ಉದ್ಘಾಟಿಸಲಿದ್ದು, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ನಾನೂ ಕಾಶ್ಮೀರಕ್ಕೆ ಹೋಗಿದ್ದೆ ಎಂಬ ಕೃತಿಯನ್ನು ಸಂಸ್ಕ್ರತಿ ಚಿಂತಕ ಡಾ.ಮಹಾಂತೇಶ ಬಿರಾದಾರ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 1ಕ್ಕೆ ಸಾವು ಇರದ ಕಾವ್ಯಕ್ಕೆ ಸಾವಿರ ರು. ಬಹುಮಾನ ಎಂಬ ಗೋಷ್ಠಿ ನಡೆಯಲಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಕುಶಾಲ ಬರಗೂರು ಉದ್ಘಾಟಿಸಲಿದ್ದು, ಸಾಹಿತಿ ಯು.ಎನ್.ಕುಂಟೋಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈಗಾಗಲೇ 125 ಪುಸ್ತಕಗಳನ್ನು ಆಹ್ವಾನಿಸಿ ಅದರಲ್ಲಿ ಐದು ಪುಸ್ತಕಗಳನ್ನು ಆಯ್ಕೆ ಮಾಡಿ ತಲಾ ₹10 ಸಾವಿರ ಬಹುಮಾನ ನೀಡಿ ಪುಸ್ತಕ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಕಾರ್ಯದರ್ಶಿ ಸಿದ್ದರಾಮ ಬಿರಾದಾರ‌ ಮಾತನಾಡಿ, ಕಳೆದ 27 ವರ್ಷಗಳಿಂದ ಕನ್ನಡ ಪುಸ್ತಕ ಪರಿಷತ್ತು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಪಾಟೀಲ, ಸಿದ್ದಲಿಂಗ ಮನಹಳ್ಳಿ, ಬಸವರಾಜ ಗವಿಮಠ ಇದ್ದರು.