ಮಂಡ್ಯ ನುಡಿಜಾತ್ರೆ ಪ್ರಯುಕ್ತ 22ರಿಂದ ಕನ್ನಡ ರಥ ಸಂಚಾರ

| Published : Sep 19 2024, 01:49 AM IST

ಮಂಡ್ಯ ನುಡಿಜಾತ್ರೆ ಪ್ರಯುಕ್ತ 22ರಿಂದ ಕನ್ನಡ ರಥ ಸಂಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಸೆ. 22ರಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆ ವಹಿಸುವರು.

ದಾಂಡೇಲಿ: ಮಂಡ್ಯದಲ್ಲಿ ಡಿ. 20ರಿಂದ 3 ದಿನ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಕನ್ನಡ ರಥ ಸಂಚರಿಸಲಿದ್ದು, ರಥಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಸೆ. 22ರಂದು ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಅಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.ರಥ ಸಂಚರಿಸುವ ಮಾರ್ಗ: ಸೆ. 22ರಂದು ಸಿದ್ದಾಪುರದಲ್ಲಿ ಉದ್ಘಾಟನೆಗೊಂಡು ಹೊರಡುವ ಕನ್ನಡ ರಥ ಅಂದು ಮಧ್ಯಾಹ್ನ 3 ಗಂಟೆಗೆ ಹೊನ್ನಾವರ ತಲುಪಲಿದೆ. ಅಲ್ಲಿಂದ ಸಂಜೆ 5 ಗಂಟೆಗೆ ಕುಮಟಾ ತಲುಪಲಿದೆ. ಸೆ. 23ರಂದು ಬೆಳಗ್ಗೆ 10 ಗಂಟೆಗೆ ಅಂಕೋಲಾಕ್ಕೆ ತಲುಪುವ ರಥ ಮಧ್ಯಾಹ್ನ 12 ಗಂಟೆಗೆ ಕಾರವಾರಕ್ಕೆ ತೆರಳಲಿದೆ. ಮಧ್ಯಾಹ್ನ 3 ಗಂಟೆಗೆ ಗೋವಾ ಗಡಿ ಕಾಣಕೋಣದವರೆಗೆ ರಥ ಸಂಚರಿಸಿ ರಾತ್ರಿ ಜೋಯಿಡಾದಲ್ಲಿ ವಾಸ್ತವ್ಯ ಮಾಡಲಿದೆ.

ಸೆ. 24ರಂದು ಜೋಯಿಡಾದಿಂದ ಸಾಗಿ ಅಂದು ಬೆಳಗ್ಗೆ 11.30ಕ್ಕೆ ದಾಂಡೇಲಿ, ಸಂಜೆ 4 ಗಂಟೆಗೆ ಹಳಿಯಾಳಕ್ಕೆ ಸಾಗಲಿದೆ. ಪಟ್ಟಣದಲ್ಲಿ ವಾಸ್ತವ್ಯ ಮಾಡಿ ಸೆ. 25ರಂದು ಬೆಳಗ್ಗೆ 11 ಗಂಟೆಗೆ ಯಲ್ಲಾಪುರಕ್ಕೆ, ಮಧ್ಯಾಹ್ನ 3 ಗಂಟೆಗೆ ಶಿರಸಿಗೆ ರಥ ತಲುಪಿ ಉತ್ತರ ಕನ್ನಡ ಜಿಲ್ಲೆಯ ರಥ ಸಂಚಾರ ಸಂಪನ್ನವಾಗಲಿದೆ. ನಂತರ ಕನ್ನಡ ರಥ ಹಾನಗಲ್ಲ ಮಾರ್ಗವಾಗಿ ಹಾವೇರಿ ಜಿಲ್ಲೆಗೆ ಮುಂದುವರಿಯಲಿದೆ. ಬಳಿಕ ರಾಜ್ಯಾದ್ಯಂತ ಸಂಚರಿಸಿ ಸಮ್ಮೇಳನ ನಡೆಯುವ ಮಂಡ್ಯ ತಲುಪಲಿದೆ ಎಂದು ತಿಳಿಸಿದ್ದಾರೆ.