ಆಗಸ್ಟ್‌ 13ರಿಂದ ರಾಮನಗರದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ

| Published : Aug 02 2024, 12:45 AM IST / Updated: Aug 02 2024, 12:46 AM IST

ಸಾರಾಂಶ

ರಾಮನಗರ ಜಿಲ್ಲೆಯಲ್ಲಿ ಆಗಸ್ಟ್ 13ರಿಂದ 17ರವರೆಗೆ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸಲಿದ್ದು, ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರುವುದು ಸೇರಿದಂತೆ ರಥ ಸಂಚರಿಸುವ ಮಾರ್ಗಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಸೂಚಿಸಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

-ಪೂರ್ವಭಾವಿ ಸಭೆಯಲ್ಲಿ ಅದ್ಧೂರಿ ಸ್ವಾಗತ, ಅಗತ್ಯ ಕ್ರಮಕ್ಕೆ ಎಡಿಸಿ ಸೂಚನೆ ರಾಮನಗರ: ಜಿಲ್ಲೆಯಲ್ಲಿ ಆಗಸ್ಟ್ 13ರಿಂದ 17ರವರೆಗೆ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸಲಿದ್ದು, ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರುವುದು ಸೇರಿದಂತೆ ರಥ ಸಂಚರಿಸುವ ಮಾರ್ಗಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಜಿಲ್ಲೆಯ ತಹಸೀಲ್ದಾರರಿಗೆ ಸೂಚನೆ ನೀಡಿದರು.

ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ರಾಜ್ಯ ‘ಕರ್ನಾಟಕ’ ಎಂದು ಮರುನಾಮಕರಣವಾಗಿ 2023ರ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಂಡಿದೆ. ಈ ಶುಭ ಸಂದರ್ಭದಲ್ಲಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.

ಕನ್ನಡ ಜ್ಯೋತಿ ರಥ ಆ.13ರಂದು ಮಾಗಡಿ, 14ರಂದು ರಾಮನಗರ, 15ರಂದು ಹಾರೋಹಳ್ಳಿ, 16ರಂದು ಕನಕಪುರ ಮತ್ತು 17ರಂದು ಚನ್ನಪಟ್ಟಣಕ್ಕೆ ಆಗಮಿಸಲಿದೆ. ಜನಪ್ರತಿನಿಧಿಗಳು, ರಥ ಸಂಚಾರದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಎಲ್ಲಾ ತಹಸೀಲ್ದಾರರು ಎಚ್ಚರಿಕೆ ವಹಿಸಬೇಕು. ರಥ ಸಂಚರಿಸುವ ಮಾರ್ಗವನ್ನು ಮೊದಲೇ ಸಿದ್ಧಪಡಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ರಥಯಾತ್ರೆ ಸಂಚರಿಸುವ ವೇಳೆ ಖುದ್ದು ತಹಸೀಲ್ದಾರರು ಹಾಜರಿದ್ದು ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ.ನಾಗೇಶ್‌, ಕನ್ನಡ ಪರ ಸಂಘಟನೆ ಮುಖಂಡರಾದ ರಾಜು, ರವಿ, ಶಿವು, ಜಗದೀಶ್, ಮಾದೇಗೌಡ, ಕಿರಣ್, ಜಯಕುಮಾರ್ ಮತ್ತಿತರರಿದ್ದರು.