ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕನ್ನಡ ನಮ್ಮ ಜೀವನವಾಗಿದ್ದು, ಗಡಿ, ನಾಡು, ನುಡಿ, ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ತಹಸಿಲ್ದಾರ್ ಸುದರ್ಶನ್ ಯಾದವ್ ತಿಳಿಸಿದರು.ನಗರದ ಝಾನ್ಸಿರಾಣಿ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿದರು.
ಎರಡು ಸಾವಿರ ವರ್ಷಗಳ ಇತಿಹಾಸಕನ್ನಡ ಭಾಷೆಗೆ ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ನಾಡು ನುಡಿಗಾಗಿ ದುಡಿದ ಅನೇಕ ಮಹನೀಯರಿದ್ದಾರೆ. ಇಡೀ ದೇಶದಲ್ಲೇ ಕರ್ನಾಟಕ ವಿಶೇಷವಾದ ಘನತೆ, ಗೌರವ ಸ್ಥಾನಮಾನವಿರುವ ರಾಜ್ಯವಾಗಿದೆ. ಅವಿಭಜಿತ ಕೋಲಾರ ಜಿಲ್ಲೆ ಗಡಿಭಾಗದಲ್ಲಿರುವುದರಿಂದ ಅನ್ಯ ಭಾಷೆಗಳ ಪ್ರಭಾವ ಹೆಚ್ಚಾಗಿದೆ. ಇಲ್ಲಿ ಕನ್ನಡ ಉಳಿಸಲು ತಾಲೂಕಿನ ಪ್ರತಿಯೊಂದು ಮನೆಯಲ್ಲಿಯೂ ಕನ್ನಡದಲ್ಲೇ ಮಾತನಾಡುವಂತಾಗಬೇಕು. ಶಾಲೆಗಳಲ್ಲಿಯೂ ಕನ್ನಡಕ್ಕೆ ಒತ್ತು ನೀಡಬೇಕೆಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿ ರಕ್ಷಣೆಗಾಗಿ ದುಡಿದ ಹಲವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಕನ್ನಡಾಭಿಮಾನಿಗಳ ಜೊತೆಗೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳೂ ಸಹ ಗೈರುಹಾಜರಿಗಿದ್ದು, ನಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಆಗಮಿಸದೆ ಕೇವಲ ನಾಲ್ಕೈದು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಸಾರ್ವಜನಿಕರಿಲ್ಲದ ಈ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕಳೆ ಇಲ್ಲದಂತಾಗಿತ್ತು.ಈ ಸಂದರ್ಭದಲ್ಲಿ ತಾ.ಪಂ ಇಓ ಎಸ್. ಆನಂದ, ಪೌರಾಯುಕ್ತ ಜಿ.ಎನ್.ಚಲಪತಿ, ಡಿವೈಎಸ್ಪಿ ಮುರಳೀಧರ್, ಬಿಇಒ ಉಮಾದೇವಿ, ಸರ್ಕಾರಿ ನೌಕರರ ಅಧ್ಯಕ್ಷ ಮುನಿರೆಡ್ಡಿ, ನಗರಸಭೆ ಅಧ್ಯಕ್ಷ ಜಗನ್ನಾಥ್, ಉಪಾದ್ಯಕ್ಷೆ ಕೆ.ರಾಣಿಯಮ್ಮ, ಕಸಾಪ ಅಧ್ಯಕ್ಷ ಶ್ರೀನಿವಾಸ್, ಕರವೇ ಶಿವರಾಮೇಗೌಡ ಬಣದ ತಾಲೂಕು ಅಧ್ಯಕ್ಷ ಶ್ರೀರಾಮನಗರ ಶಂಕರ್, ಕರವೇ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಜಯಕರ್ನಾಟಕ ಸತ್ಯನಾರಾಯಣಸಿಂಗ್ ಉಪಸ್ಥಿತರಿದ್ದರು.